ಕರಾವಳಿಯಲ್ಲಿ ಇತಿಹಾಸ ನಿರ್ಮಿಸಿದ ಡಾ.ಗೋವಿಂದ ಬಾಬು ಪೂಜಾರಿ.. ತಮ್ಮ ಕಂಪನಿ ಮೂಲಕವ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದ್ದ ಡಾ.ಪೂಜಾರಿ, ತಮ್ಮ ಹುಟ್ಟೂರು ಸುತ್ತಮುತ್ತಲ ಮತ್ತಷ್ಟು ಯುವಜನರಿಗೆ ಕೆಲಸ ಕೊಡಿಸಲೆಂದು ‘ಉದ್ಯೋಗ ಮೇಳ’ ಆಯೋಜಿಸಿ, 2740ಕ್ಕೂ ಹೆಚ್ಚು ಮಂದಿಗೆ ನೌಕರಿ ಕೊಡಿಸಿದ್ದಾರೆ. 12 ಮಂದಿ ಅಂಗವಿಕಲರಿಗೆ, ಓರ್ವ ದೃಷ್ಟಿಹೀನ ಯುವತಿಯ ಪಾಲಿಗೂ ಇವರು ದಾರಿದೀಪವಾದರು..
ಉಡುಪಿ: ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದ ವತಿಯಿಂದ ಔದ್ಯೋಗಿಕ ಕ್ರಾಂತಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹೂಡಿಕೆದಾರರ ಸಮಾವೇಶ ನಡೆದರೆ, ಇನ್ನೊಂದೆಡೆ ಉಡುಪಿ ಸಮೀಪದ ಉಪ್ಪುಂದ ಬಳಿ ಬೃಹತ್ ಉದ್ಯೋಗ ಮೇಳವೊಂದು ಸದ್ದಿಲ್ಲದೆ ನಡೆದಿದೆ. ಸುಶಿಕ್ಷಿತ ಸಾವಿರಾರು ಮಂದಿಗೆ ಈ ಮೇಳ ಉದ್ಯೋಗ ಕಲ್ಪಿಸಿಕೊಟ್ಟಿರುವುದು ಕರಾವಳಿ ಪಾಲಿಗೆ ಇತಿಹಾಸ ಎಂಬಂತಾಗಿದೆ.
ಉಪ್ಪುಂದದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಸಾಮಾಜಿಕ ಸೇವೆ ಮೂಲಕ ಪ್ರತಿಷ್ಠಿತ ಎನ್ಜಿಒ ಆಗಿ ಗುರುತಾಗಿದೆ. ಪ್ರತಿಷ್ಠಿತ ಆಹಾರೋದ್ದಿಮೆ ಸಂಸ್ಥೆ ChefTalkನ ಮಾಲೀಕರಾಗಿರುವ ಡಾ.ಗೋವಿಂದ ಬಾಬು ಪೂಜಾರಿ ಅವರ ಮುಂದಾಳುತ್ವದ ಈ ಟ್ರಸ್ಟ್ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಪ್ರಯತ್ನಕ್ಕಿಳಿದಿದೆ. ಅಕ್ಟೋಬರ್ 30ರಿಂದ ಉಪ್ಪುಂದದ ಕೆರ್ಗಾಲ್ ಬಳಿಯ ನಂದನವನ ಹಾಸ್ಪಿಟಾಲಿಟಿ ಸರ್ವಿಸಸ್, ಪ್ರಜ್ಞಾ ಸಾಗರ್ & ಹಾಲ್ಸ್ ಇಲ್ಲಿ ಈ ಉದ್ಯೋಗ ಮೇಳ ನಡೆದಿದ್ದು ಬರೋಬ್ಬರಿ 2740ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಕ್ಕಿದೆ. ಎಂದು ಡಾ.ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.
ಬಿಎ, ಬಿಕಾಂ, ಬಿಬಿಎಂ, ಬಿಸಿಎ, ಬಿಇ, ಬಿಎಸ್ಸಿ, ಡಿಪ್ಲೊಮಾ, ಐಟಿಐ ಶಿಕ್ಷಣ ಪಡೆದವರಿಗಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, IBM ಸಹಿತ ಐಟಿ ಕಂಪನಿಗಳು, SBI ಲೈಫ್ ಸಹಿತ ಇನ್ಶುರೆನ್ಸ್ ಕಂಪನಿಗಳು, ಅಮೆಜಾನ್ ಸಹಿತ ಇ’ಕಾಮರ್ಸ್ ಸಂಸ್ಥೆಗಳೂ ಸೇರಿದಂತೆ ಹತ್ತಾರು ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇ ವಿಶೇಷ.
ಉಡುಪಿ-ಬೈಂದೂರು ಪಾಲಿಗೆ ಇದೊಂದು ಐತಿಹಾಸಿಕ ಉದ್ಯೋಗ ಮೇಳವಾಗಿತ್ತು, ಈ ಮೂಲಕ ಸುಮಾರು 3000 ಮಂದಿಗೆ ಉದ್ಯೋಗ ಕೊಡಿಸಲು ವಿವಿಧ ಕಂಪನಿಗಳು ಕಸರತ್ತು ನಡೆಸಿದ್ದವು.
ಈ ಉದ್ಯೋಗ ಮೇಳವು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿತ್ತು. ಸುಮಾರು 5,500 ಮಂದಿ ವಿದ್ಯಾವಂತ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು. ಸಮರ್ಥ ಅಭ್ಯರ್ಥಿಗಳನ್ನು ಅಳೆದು ತೂಗಿದ ವಿವಿಧ ಕಂಪನಿಗಳು ಈ ಮೇಳದಲ್ಲಿ 2740ಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ನೀಡಿದೆ. 12 ಮಂದಿ ಅಂಗವಿಕಲರು ಹಾಗೂ ಓರ್ವ ಕಣ್ಣಿಲ್ಲದ ಯುವತಿಗೂ ನೌಕರಿ ಸಿಕ್ಕಿದೆ
ಅತ್ತ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷ ಉದ್ಯೋಗ ಸೃಷ್ಟಿಯ ಸಂಕಲ್ಪ ಮಾಡಿದ್ದರೆ, ಇತ್ತ ಕರುನಾಡ ಕರಾವಳಿಯಲ್ಲಿ ಸಮಾಜಮುಖಿ ಉದ್ಯಮಿಯೊಬ್ಬರು ತಾವೂ ಮೂರೂವರೆ ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಮಹಾಯಜ್ಞಕ್ಕೆ ಮುನ್ನುಡಿ ಬರೆದಿದ್ದಾರೆ.
ಈ ಉದ್ಯೋಗ ಮೇಳದ ಯಶಸ್ಸಿಗಾಗಿ ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಯುವಕ-ಯುವತಿಯರು ಹಗಲಿರುಳು ಶ್ರಮಿಸಿದ್ದಾರೆ. ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಪರಿಣಿತರನ್ನಾಗಿಸಲಾಗಿದೆ ಎಂದಿರುವ ಗೋವಿಂದ ಬಾಬು ಪೂಜಾರಿ, ಈ ಉದ್ಯೋಗ ಮೇಳದ ಮೂಲಕ ನೌಕರಿ ಪಡೆದಿರುವ ಮಂದಿಗೆ ಶುಭ ಹಾರೈಸಿದ್ದಾರೆ.
ನಿರುದ್ಯೋಗ ನಿವಾರಣೆಯೇ ಡಾ.ಗೋವಿಂದ ಪೂಜಾರಿಯವರ ದೂರದೃಷ್ಟಿ..
ಪ್ರತಿಷ್ಠಿತ ChefTalk, ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ, ಪ್ರಜ್ಞಾ ಸಾಗರ್ ಹೋಟೇಲ್ಸ್ ರೆಸಾರ್ಟ್, ಮತ್ಸ್ಯ ಬಂಧನ ಸಹಿತ ತಮ್ಮ ಒಡೆತನದ ವಿವಿಧ ಸಂಸ್ಥೆಗಳ, ಯೋಜನೆಗಳ ಮೂಲಕ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿರುವ ಡಾ.ಗೋವಿಂದ ಬಾಬು ಪೂಜಾರಿ, ಬೈಂದೂರಿನ ಈ ಬೃಹತ್ ‘ಉದ್ಯೋಗ ಮೇಳ’ದ ಮೂಲಕ ಸುಮಾರು ಎರಡೂವರೆ ಸಾವಿರ ಮಂದಿಗೆ ನೌಕರಿ ಕೊಡಿಸಲು ನಡೆಸಿರುವ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಈ ಕಾರ್ಯದಿಂದಾಗಿ ಬೈಂದೂರು ಕ್ಷೇತ್ರವನ್ನು ಎಲ್ಲರೂ ತಿರುಗಿ ನೋಡುವಂತಾಗಿದೆ. ಯಾವ ರಾಜಕೀಯ ನಾಯಕರೂ ಮಾಡದ ಕೆಲಸವನ್ನು ಗೋವಿಂದ ಬಾಬು ಪೂಜಾರಿ ಮಾಡಿ ತೋರಿಸಿದ್ದಾರೆ ಎಂಬ ಊರ ಜನರ ಹೆಮ್ಮೆಯ ಮಾತುಗಳು ಕೇಳುಗರಿಗೂ ಖುಷಿ ಅನ್ನಿಸುತ್ತದೆ.