ಬೆಂಗಳೂರು: ಸಚಿವ ಎಸ್ಟಿ ಸೋಮಶೇಖರ್ ಕಾರ್ಯವೈಖರಿಗೆ ಎದುರಾಳಿ ಪಕ್ಷಗಳ ಮುಖಂಡರೂ ಸೆಲ್ಯೂಟ್ ಹೊಡೆದಿದ್ದಾರೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ 300ಕ್ಕೂ ಹೆಚ್ಚು ಮಂದಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಸೂಲಿಕೆರೆ ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಕುಮಾರ್ ಮತ್ತು ಯಾಶಿನ್ ಇವರ ನೇತೃತ್ವದಲ್ಲಿ ಎಸ್.ಕೆ. ಅಂಜದ್ ವಾಸಿಮ್ ಪಾಷ , ವಾಸಿಮ್ , ಮೆಹಬೂಬ್ ಪಾಷ, ಮುಬಾರಕ್ ಪಾಷ , ಅಜ್ಗರ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ಸೂಲಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸಿದ್ದರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ತಿಮ್ಮೇಗೌಡ. ರಾಮಸಂದ್ರ ಶಕ್ತಿ ಕೇಂದ್ರದ ಅಧ್ಯಕ್ಷ ರಾಮೋಹಳ್ಳಿ ಚೇತನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಎಂ.ರಂಗರಾಜು ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಸೂಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಬಸ್ತಿ ಹಾಗೂ ಚಿಕ್ಕಬಸ್ತಿ ಗ್ರಾಮದ ಸುಮಾರು 300ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪಕ್ಷದ ಶಾಲು ಹಾಕಿ ಬಿಜೆಪಿ ಬಾವುಟ ನೀಡಿ ಬರಮಾಡಿಕೊಂಡ ಸನ್ನಿವೇಶ ಗಮನಸೆಳೆಯಿತು.
ಈ ಮುಖಂಡರನ್ನು ಬರಮಾಡಿಕೊಂಡ ಸಚಿವ ಎಸ್.ಟಿ.ಸೋಮಶೇಖರ್, ಬಿಜೆಪಿಯ ತತ್ವ, ಸಿದ್ಧಾಂತ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಬಂದಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಸಹಕಾರ ಸಚಿವರಾದ ಎಸ್ .ಟಿ. ಸೋಮಶೇಖರ್ ಹೇಳಿದರು.
ರಾಜ್ಯದಲ್ಲಿ ಕೋವಿಡ್ ಬಂದಾಗ ಕ್ಷೇತ್ರದ ಜನರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವಾಗ ಎಲ್ಲಿ ಹೋಗಿದ್ದರು? ಆಗ ಜನರು ನೆನಪಿಗೆ ಬಂದಿರಲಿಲ್ಲವೇ ಎಂದು ಹರಿಹಾಯ್ದ ಸಚಿವ ಸೋಮಶೇಖರ್, ಕೋವೀಡ್ ಸೋಂಕಿಗೆ ಒಳಗಾದವರಿಗೆ ಔಷಧೋಪಚಾರ, ಆಸ್ಪತ್ರೆಯಲ್ಲಿ ಬೆಡ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳುವ ಮೂಲಕ ಕುಟುಂಬ ನಿರ್ವಹಣೆ ಮಾಡುವುದಕ್ಕೆ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ 1 ಲಕ್ಷ ರೂಪಾಯಿ ಸಹಾಯಧನ ನೀಡಿ ನೆರವಿಗೆ ನಿಂತಿದ್ದೆ ಎಂದು ಹೇಳಿದರು. ಶಾಸಕ, ಸಚಿವರಾಗಿ ಸುಮಾರು ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಿದ್ದೇನೆ ಎಂದರು.