ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಮಾತೃಪಕ್ಷ ಬಿಜೆಪಿಗೆ ಮರಳಿರುವ ಬೆಳವಣಿಗೆ ಕರ್ನಾಟಕ ರಾಜಕಾರಣದಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಜಕೀಯ ಪಂಡಿತರೂ ಬಗೆಬಗೆಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ಬಿಜೆಪಿ ವರಿಷ್ಠರಿಂದ ಅಪಮಾನವಾಗಿದೆ ಎಂದು ಆಕ್ರೋಶಗೊಂಡು ಕಮಲ ಪಕ್ಷ ತೊರೆದಿದ್ದ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿ ಕೈ ಚಿಹ್ನೆಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕದನದಲ್ಲಿ ಸೋಲುಂಡರೂ ಶೆಟ್ಟರ್ ಅವರನ್ನು ಕಾಂಗ್ರೆಸ್ ಕೈಬಿಡಲಿಲ್ಲ. ವಿಧಾನ ಪರಿಷತ್ ಅಖಾಡಕ್ಲಿಳಿಸಿ ಮೇಲ್ಮನೆ ಶಾಸಕರನ್ನಾಗಿಸಿ ಉನ್ನತ ಹುದ್ದೆಯನ್ನೂ ನೀಡಿದೆ. ಆದರೆ ಇದ್ದಕ್ಕಿದ್ದಂತೆ ಅವರು ಮೂಲ ಮನೆಗೆ ಮರಳಿದ ಬೆಳವಣಿಗೆ ಕುತೂಹಲಕಾರಿ ವಿದ್ಯಮಾನ.
ಮೊನ್ನೆ ಮೊನ್ನೆಯ ವರೆಗೂ ಬಿಜೆಪಿ ನಾಯಕರ ವಿರುದ್ದ ವಾಗ್ಧಾಳಿ ನಡೆಸುತ್ತಿದ್ದ ಶೆಟ್ಟರ್, ರಾಮೋತ್ಸವ ವಿಚಾರದಲ್ಲೂ ಕಮಲ ನಾಯಕರ ಬಗ್ಗೆ ಬೇಸರ ಹೊರ ಹಾಕಿದ್ದರು. ಆದರೆ, ರಾಮೋತ್ಸವ ನಡೆದ ಎರಡೇ ದಿನಗಳಲ್ಲಿ ಅವರ ನಿರ್ಧಾರ ಬದಲಾಗಿರುವುದೇ ರಾಜಕೀಯದ ಅಚ್ಚರಿ.
ರಹಸ್ಯ ಬಿಚ್ಚಿಟ್ಟ ಅಶೋಕ್..!
ಮುಸ್ಲಿಮರ ಓಲೈಕೆ, ಹಿಂದೂಗಳ ಕಡೆಗಣನೆ ನೋಡಿ ಬೇಸತ್ತು ಕಾಂಗ್ರೆಸ್ ತೊರೆದರೇ ಶೆಟ್ಟರ್? ಎಂಬ ಪ್ರಶ್ನೆ ಹಲವರನ್ನು ಕಾಡಿದೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡಾ ಹಠಾತ್ ರಾಜಕೀಯ ಬೆಳವಣಿಗೆಗೆ ಇದೇ ಕಾರಣವನ್ನು ನೀಡಿದ್ದಾರೆ.
ಜಗದೀಶ ಶೆಟ್ಟರ್ ಬಿಜೆಪಿಗೆ ಬಂದಿರುವುದೇನೂ ಆಪರೇಷನ್ ಕಮಲ ಅಲ್ಲ. ಕಾಂಗ್ರೆಸ್ ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣವನ್ನು ತಡೆದುಕೊಳ್ಳಲಾರದೆ ಶೆಟ್ಟರ್ ಮರಳಿ ತಮ್ಮ ಗೂಡು ಸೇರಿದ್ದಾರೆ ಎಂದು ಆರ್.ಅಶೋಕ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇನೂ ಆಪರೇಷನ್ ಕಮಲ ಅಲ್ಲ. ಜಗದೀಶ ಶೆಟ್ಟರ್ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದು ಬಂದಿದ್ದಾರೆ. ಅವರು ಮುಸ್ಲಿಮರನ್ನು ಓಲೈಸುವ ಪಕ್ಷಕ್ಕೆ ಏಕಾಏಕಿ ಸೇರಿಬಿಟ್ಟಿದ್ದರು. ರಾಮನವಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತೆ ಆಗಿತ್ತು. ಮುಸ್ಲಿಮರ ಓಲೈಕೆ ಹಾಗೂ ಹಿಂದೂಗಳ ಕಡೆಗಣನೆಯನ್ನು ನೋಡಿ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು. ಹಾಗಾಗಿ ಶೆಟ್ಟರ್ ಅವರು ಮರಳಿ ಗೂಡಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮೊದಲಾದ ಕಾರಣಗಳಿಂದ ಇನ್ನಷ್ಟು ನಾಯಕರು ಬಿಜೆಪಿ ಕಡೆ ಬರಲಿದ್ದಾರೆ. ಇನ್ನೇನಿದ್ದರೂ ಕಾಂಗ್ರೆಸ್ ಚೋಡೊ’ ಎಂಬ ಘೋಷಣೆ ಕೇಳಿಬರಲಿದೆ. ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿಯವರ ಪಕ್ಷಗಳು ಕಾಂಗ್ರೆಸ್ ನಾಲಾಯಕ್ ಎಂದು ಓಡಿಸಿವೆ. ಕಾಂಗ್ರೆಸ್ ಪಕ್ಷವನ್ನು ದೆಹಲಿಯಿಂದಲೂ ಹೊರಗೆ ಹಾಕಲಾಗುತ್ತದೆ. ಈ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದರು.
ಬಿಜೆಪಿಯವರು ನಮ್ಮಲ್ಲಿಗೆ ಬಂದರು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರು. ಈಗ ಆ ಮಾತುಗಳು ನಿಲ್ಲಲಿದೆ. ಕಾಂಗ್ರೆಸ್ ನಲ್ಲಿ ನಾಯಕರ ಗತಿ ಇಲ್ಲವಾಗಿರುವುದರಿಂದ ನಮ್ಮ ನಾಯಕರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದರು.
























































