ಬೆಂಗಳೂರು: ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳು ರಾಜ್ಯದ ಇತರೆ ಸರ್ಕಾರಿ ಶಾಲೆಗಳಿಗೆ ಮಾದರಿ. ಜನಪ್ರತಿನಿಧಿಗಳಿಗೆ ರಾಜಕೀಯ ಹಿತಾಸಕ್ತಿ ಇದ್ದಲ್ಲಿ ಯಾವ ರೀತಿ ಬಡ ಮಕ್ಕಳಿಗೂ ಕೂಡ ಉತ್ಕೃಷ್ಟ ಜ್ಞಾನ ವ್ಯವಸ್ಥೆ ರೂಪಿಸಬಹುದು ಎಂಬುದಕ್ಕೆ ಉದಾಹರಣೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ. ಅವರು ಪ್ರತಿನಿಧಿಸುತ್ತಿರುವ ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಲೆಗಳು ಹೈಟೆಕ್ ಸ್ಪರ್ಶ ಪಡೆದು ದೇಶದಲ್ಲೇ ಮಾದರಿ ಶಾಲೆಗಳೆನಿಸಿವೆ.
ಬೆಂಗಳೂರಿನ ಮಡಿವಾಳ ಹಾಗೂ ಆಡುಗೋಡಿ ಕಾಲೇಜುಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗೂ ಈ ಎರಡೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ರಾಮಲಿಂಗಾ ರೆಡ್ಡಿ ರವರೇ ಭರಿಸುತ್ತಿದ್ದಾರೆ ಎಂಬುದು ಗಮನಾರ್ಹವಾದ ಸಂಗತಿ. ಈ ಪರಿಕರಗಳ ವಿತರಣಾ ಸಮಾರಂಭ ಇಂದು ನಡೆದಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಮುಖರು ಶಾಲೆಗಳ ವ್ಯವಸ್ಥೆ ಕಂಡು ಕೊಂಡಾಡಿದರು.
‘Education is not only the birth right of every human being but also a weapon of social change’ ಎಂಬ ಸಮಾಜದ ಬದಲಾವಣೆಗೆ ಶಿಕ್ಷಣವೇ ಅಸ್ತ್ರ ಎಂಬ ಬಾಬಾಸಾಹೇಬ್ ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಕ್ಕೂ ಅನ್ವಯಿಸುತ್ತದೆ ಎಂದು ಶಿಕ್ಷಣ ತಜ್ಞರು ಬಣ್ಣಿಸಿದರು.
ರಾಮಲಿಂಗಾ ರೆಡ್ಡಿರವರ ಕ್ಷೇತ್ರದ ಮಡಿವಾಳ ಹಾಗೂ ಆಡುಗೋಡಿ ಕಾಲೇಜುಗಳು ಕಳೆದ 4 ವರ್ಷ ದ ಹಿಂದೆ ಪಿಯುಸಿಯಲ್ಲಿ 50% ಫಲಿತಾಂಶಕ್ಕೆ ಹರಸಾಹಸಪಡುತ್ತಿದ್ದವು. ಇಂದು ದ್ವೀತಿಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಇದೇ ಶಾಲೆಗಳು ಆಡುಗೋಡಿ 80.68% , ಮಡಿವಾಳ 88% ದಾಖಲಿಸಿವೆ. ಈ ಎರಡೂ ಕಾಲೇಜುಗಳಲ್ಲಿ ಒಟ್ಟು 338 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಅದರಲ್ಲಿ 235 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದು ಸಂತೋಷದ ವಿಷಯ. ಈ ಕಾಲೇಜುಗಳಲ್ಲಿರುವ ಸೌಲಭ್ಯಗಳು ಯಾವುದೇ ಕಾರ್ಪೊರೇಟ್ ಶಾಲಾ ಕಾಲೇಜಿಗೆ ಕಡಿಮೆ ಇಲ್ಲ ಎಂಬಂತಿದೆ.
ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರಂತಹ ಮಹನೀಯರು ಶಿಕ್ಷಣವೊಂದೇ ಸಮಾಜದಲ್ಲಿ ಬದಲಾವಣೆ ತರಬಲ್ಲದು ಎಂಬುದನ್ನು ಸಾರಿದ್ದಾರೆ. ಅದನ್ನು ಅಕ್ಷರಶಃ ಜಾರಿಗೆ ತರುತ್ತಿರುವ ಸಾರಿಗೆ ಸಚಿವರು ತಮ್ಮ ಕ್ಷೇತ್ರದ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯಗಳು, ಸಮರ್ಥ ಶಿಕ್ಷಕ ಸಮುದಾಯ, ಕಾಲಕಾಲಕ್ಕೆ ಶಾಲಾ ಕಾಲೇಜುಗಳಿಗೆ ಭೇಟಿ, ಪರಾಮರ್ಶೆ ಮಾಡುವ ಮೂಲಕ ಗಣನೀಯ ಅಭಿವೃದ್ಧಿಗೆ ಕಾರಣರಾಗಿದ್ಧಾರೆ ಎಂದು ಶಿಕ್ಷಣ ತಜ್ಞರು ವಿಶ್ಲೇಷಿಸಿದರು.