ಮಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ವಸಂತ ಬಂಗೇರ ಬುಧವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ . ಹಿರಿಯ ಕಾಂಗ್ರೆಸ್ ನಾಯಕನ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕೆಪಿಸಿಸಿ ನಾಯಕರೂ ಆದ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರು, ಮಾಜಿ ಶಾಸಕ ವಸಂತ ಬಂಗೇರ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಮೊನ್ನೆ ಮೊನ್ನೆಯವರೆಗೂ ತಮ್ಮ ಪರವಾಗಿ ಚುನಾವಣಾ ಪ್ರಚಾರಕ್ಕೆ ಮಾರ್ಗದರ್ಶನ ಮಾಡುತ್ತಾ, ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಭಿಸುತ್ತಿದ್ದರು ಎಂದು ನೆನಪಿಸಿಕೊಂಡಿರುವ ಪದ್ಮರಾಜ್ ರಾಮಯ್ಯ ಅವರು, ವಸಂತ ಬಂಗೇರ ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಬಡವಾಗಿದೆ ಎಂದಿದ್ದಾರೆ.
ಬಂಗೇರ ಅವರು ತಮ್ಮ ರಾಜಕೀಯ ಬದುಕಿನುದ್ದಕ್ಕೂ ಹಿಂದುಳಿದ ವರ್ಗಗಳ ಪರವಾಗಿ ಹೋರಾಡುತ್ತಾ, ಹಿಂದುಳಿದ ಸಮುದಾಯದವರ ಸೇವೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟವರು. ಸಾಮಾಜಿಕ ಚಟುವಟಿಕೆಗಳು, ಧಾರ್ಮಿಕ ಕಾರ್ಯಕ್ರಮಗಳು, ಶೈಕ್ಷಣಿಕ ಕ್ಷೇತ್ದದ ಅಭಿವೃದ್ಧಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ದುಡಿದಿರುವ ವಸಂತ ಬಂಗೇರ ಅವರು, ಯುವಜನರ ಪಾಲಿಗೆ ಆಶಾಕಿರಣರಾಗಿದ್ದರು ಎಂದು ಪದ್ಮರಾಜ್ ಹೇಳಿದ್ದಾರೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಸಮಕಾಲೀನ ನಾಯಕರಾಗಿದ್ದ ಅವರು ಬದಲಾದ ನಿರ್ಧಾರದಲ್ಲಿ ಜನತಾದಳ, ಕಾಂಗ್ರೆಸ್ ಪಕ್ಷಗಳಿಗೆ ಪಕ್ಷಾಂತರಗೊಂಡು ಐದು ಬಾರಿ ಶಾಸಕರಾಗಿದ್ದರೂ ತಮ್ಮ ಬದುಕಿನುದ್ದಕ್ಕೂ ಪಕ್ಷಾತೀತ ನಾಯಕರಾಗಿ ಗುರುತಿಸಿಕೊಂಡಿದ್ದರು ಎಂದಿರುವ ಪದ್ಮರಾಜ್, ಬಿಲ್ಲವ ಸಮುದಾಯದ ಸಂಘಟನೆಯಲ್ಲೂ ವಸಂತ ಬಂಗೇರರ ಪಾತ್ರ ಅವಿಸ್ಮರಣೀಯ ಎಂದು ನೆನಪಿಸಿದ್ದಾರೆ.


























































