ಬೆಂಗಳೂರು: ಇಎಸ್ಐ ಆಸ್ಪತ್ರೆ ‘ಖರ್ಗೆ’ ಅಕ್ಷರಗಳನ್ನು ಹೋಲುವ ರೂಪದಲ್ಲಿ ನಿರ್ಮಿತವಾಗಿದೆ ಎಂಬ ಬಿಜೆಪಿ ಟೀಕೆಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಎದಿರೇಟು ನೀಡಿದ್ದಾರೆ. ಒಂದು ವೇಳೆ ‘ಖರ್ಗೆ’ ಅಕ್ಷರವನ್ನು ಹೋಲುವಂತಿದ್ದರೆ ‘ನಾನು ಬಿಜೆಪಿ ನಾಯಕರ, ಕಾರ್ಯಕರ್ತರ ಮನೆಯ ಶೌಚಾಲಯ ಶುಚಿಗೊಳಿಸಲು ಸಿದ್ಧನಿದ್ದೇನೆ. ಇಲ್ಲವಾದರೆ ಚಕ್ರವರ್ತಿ ಸೂಲಿಬೆಲೆಯವರು ಖರ್ಗೆಯವರ ಮನೆ ಶೌಚಾಲಯ ಶುಚಿಗೊಳಿಸುವಿರಾ?’ ಎಂದು ರಮೇಶ್ ಬಾಬು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು ಅವರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿರುವ ಬಿಜೆಪಿ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದರು. ಕರ್ನಾಟಕ ರಾಜ್ಯದಲ್ಲಿ ಒಂದು ಸಂಪ್ರದಾಯವಿದೆ ಯಾವುದೇ ರಾಜಕಾರಣಿಯನ್ನು ವೈಯಕ್ತಿಕ ದ್ವೇಷದಿಂದ ಟೀಕಿಸುವುದು, ಕೆಳಮಟ್ಟದ ಟೀಕೆಗಳು ಮತ್ತು ಚಾರಿತ್ರ್ಯ ವಧೆ ಮಾಡುವಂತಹ ಟೀಕೆಗಳನ್ನು ಮಾಡುವುದು ಕರ್ನಾಟಕ ರಾಜ್ಯದಲ್ಲಿ ಕಡಿಮೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದಕ್ಕೆ ಕೆಲವು ಬಿಜೆಪಿ ನಾಯಕರುಗಳು ವ್ಯತಿರಿಕ್ತವಾಗಿ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿದ್ದಾರೆ. ಮನುಷ್ಯತ್ವ ಮರೆತು ಮಾತನಾಡುವರು, ಈ ರೀತಿ ವರ್ತಿಸುವವರನ್ನು ನಮ್ಮ ಆಡುಭಾಷೆಯಲ್ಲಿ ಅಡ್ನಾಡಿಗಳು ಎಂದು ಕರೆಯುತ್ತೇವೆ. ಇಲ್ಲಾ ಏಳು ತಿಂಗಳಿಗೆ ಹುಟ್ಟಿದವರು ಎಂದು ಕರೆಯುತ್ತೇವೆ. ಬಿಜೆಪಿ ನಾಯಕರ ಟೀಕೆಗಳು ಇದಕ್ಕೆ ಪೂರಕವಾಗಿವೆ ಎಂದವರು ಅಸಮಾಧಾನ ಹೊರಹಾಕಿದರು.
ಒಬ್ಬ ರಾಷ್ಟ್ರ ನಾಯಕರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿ, ಏಕವಚನದಲ್ಲಿ ಮಾತನಾಡುವ ಕೆಳ ಮಟ್ಟದ ನಡತೆಯನ್ನು ಬಿಜೆಪಿ ನಾಯಕರು ತೋರಿದ್ದಾರೆ. ವಾರದ ಹಿಂದೆ ಅನಂತ್ ಕುಮಾರ್ ಹೆಗ್ಗಡೆಯವರು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದರು. ಅದರ ಮುಂದುವರೆದ ಭಾಗವಾಗಿ ಸೂಲಿಬೆಲೆಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾತನಾಡಿದ್ದಾರೆ. ಅನಂತ್ ಕುಮಾರ್ ಹೆಗ್ಗಡೆ, ಸೂಲಿಬೆಲೆ ಹಾಗೂ ಇನ್ನೂ ಅನೇಕ ಬಿಜೆಪಿ ನಾಯಕರು ಸಿದ್ದರಾಮಯ್ಯನವರನ್ನು, ಮಲ್ಲಿಕಾರ್ಜುನ ಖರ್ಗೆಯವರನ್ನು ಡಿ.ಕೆ. ಶಿವಕುಮಾರ್ರವರನ್ನು ಟೀಕೆ ಮಾಡಿದರೆ ದೊಡ್ಡ ನಾಯಕರಾಗುತ್ತೇವೆ ಎಂದುಕೊಂಡಿದ್ದಾರೆ. ಆ ಕಾರಣಕ್ಕೆ ಕೆಳ ಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದ ಮತ್ತು ರಾಷ್ಟ್ರದ ರಾಜಕೀಯದಲ್ಲಿ ಐದು ದಶಕಗಳ ಸುಧೀರ್ಘ ರಾಜಕೀಯ ಅನುಭವವಿರುವ ಮಲ್ಲಿಕಾರ್ಜುನ ಖರ್ಗೆಯವರು ಯಾರನ್ನು ಕೀಳು ಮಟ್ಟದಲ್ಲಿ ಟೀಕೆ ಮಾಡಿದವರಲ್ಲ. ಇಂದಿಗೂ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಶಿಸ್ತು ಪರಿಪಾಲನೆ ಮಾಡಿಕೊಂಡು ಬಂದಿದ್ದಾರೆ. ಇಡೀ ದೇಶದಲ್ಲಿ ಬೇರೆ ಸಂಸದೀಯ ಪಟುಗಳಿಗೆ ಖರ್ಗೆಯವರು ಉತ್ತಮ ಮಾರ್ಗದರ್ಶಕರಾಗಿದ್ದಾರೆ ಎಂದ ರಮೇಶ್ ಬಾಬು, ಹಿರಿಯ ನಾಯಕ ಖರ್ಗೆಯವರ ಬಗ್ಗೆ ಅವರ ಕಾರ್ಯಗಳ ಬಗ್ಗೆ ಟೀಕೆ ಮಾಡಬೇಕಾದರೆ ಸೈದ್ಧಾಂತಿಕವಾಗಿ ಆರೋಗ್ಯಕರವಾಗಿ ಟೀಕೆ ಮಾಡಿದರೆ ನಾವು ಸ್ವೀಕಾರ ಮಾಡುತ್ತೇವೆ. ಹಿಂದೆ ಎಸ್ಎಂ ಕೃಷ್ಣರವರು ಕಾಂಗ್ರೆಸ್ನಲ್ಲಿದ್ದಾಗ ಸದಾನಂದ ಗೌಡರ ನಗುವಿನ ಬಗ್ಗೆ ಟೀಕೆಯ ಮಾತನಾಡಿ ಮತ್ತೆ ಅವರಲ್ಲಿ ಕ್ಷಮೆಯಾಚಿಸಿದ್ದರು. ದೇವೇಗೌಡರು ಯಡಿಯೂರಪ್ಪನವರ ಬಗ್ಗೆ ಕೀಳು ಭಾಷೆಯಲ್ಲಿ ಮಾತನಾಡಿ ಅವರೂ ಕೂಡ ವಿಷಾದ ವ್ಯಕ್ತಪಡಿಸಿದ್ದರು ಎಂದು ಗಮನಸೆಳೆದರು.
ಅಜ್ಞಾನಿ ಚಕ್ರವರ್ತಿ ಸೂಲಿಬೆಲೆಯಾಗಲಿ, ಅಡ್ನಾಡಿಯಾದಂತಹ ಅನಂತ್ಕುಮಾರ್ ಹೆಗ್ಗಡೆಯಾಗಲಿ ದೊಡ್ಡ ನಾಯಕರಿಗೆ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿ ನಾಯಕರಾಗುವ ಆಸೆ ಬಿಡಬೇಕು. ನೀವು ಹೀಗೆ ಟೀಕೆ ಮಾಡಿದರೆ ನಾವು ನಿಮ್ಮನ್ನು ಕೆಳ ಮಟ್ಟದ ಭಾಷೆಯಲ್ಲಿ ಟೀಕೆ ಮಾಡುವ ಅನಿವಾರ್ಯತೆಯೂ ಇಲ್ಲ ಅವಶ್ಯಕತೆಯೂ ಇಲ್ಲ. ಆದರೆ, ನಿಮ್ಮ ಎಲ್ಲಾ ಟೀಕೆಗಳನ್ನು ನಾವು ಸ್ವೀಕರಿಸುತ್ತಾ ಕೂರುವುದಿಲ್ಲ. ನಿಮ್ಮ ತಪ್ಪನ್ನುನಿಮಗೆ ಕಾಂಗ್ರೆಸ್ ಪಕ್ಷ ಎತ್ತಿ ತೋರಿಸುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಕ್ಕೆ ಅನುಕೂಲವಾಗುವಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳ ಬಗ್ಗೆ ವಿಮರ್ಶೆ ಮಾಡಿದ್ದರೆ ಒಪ್ಪಬಹುದಿತ್ತು ಎಂದು ರಮೇಶ್ ಬಾಬು ಪ್ರತಿಪಾದಿಸಿದರು.
ಖರ್ಗೆಯವರು ತಮ್ಮ ಅನುದಾನದಡಿಯಲ್ಲಿ ನಿರ್ಮಾಣ ಮಾಡಿಸಿರುವ ಇಎಸ್ಐ ಆಸ್ಪತ್ರೆಯನ್ನು ಯಾರ ಮನೆಯ ದುಡ್ಡಿನಲ್ಲಿ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಖರ್ಗೆಯವರು ಅವರ ಹೆಸರನ್ನು ಇಟ್ಟುಕೊಂಡಿದ್ದಾರೆ. ಡ್ರೋಣ್ ಸರ್ವೆ ಮಾಡಿ ನೋಡಿದರೆ ಗೊತ್ತಾಗುತ್ತದೆ ಎಂದು ಸೂಲಿಬೆಲೆ ಚಕ್ರವರ್ತಿ ಹೇಳಿದ್ದಾರೆ. ಖರ್ಗೆಯವರು ಕಟ್ಟಿಸಿರುವ ಆಸ್ಪತ್ರೆಯನ್ನು ಡ್ರೋಣ್ ಸರ್ವೆ ಮಾಡಲು ಈ ದೇಶದ ಕಾನೂನಿನಲ್ಲಿ ಅವಕಾಶವಿದೆ. ನೀವು ನಾಗಪುರದಲ್ಲಿ ಕಟ್ಟಿರುವ ನಿಮ್ಮ ಸಂಘ ಪರಿವಾರದ ಕಟ್ಟಡಕ್ಕೆ ಡ್ರೋಣ್ ಸರ್ವೆ ಮಾಡುವ ಅವಕಾಶವಿದೆಯಾ ಹೇಳಿ ಎಂದು ತರಾಟೆಗೆ ತೆಗೆ್ಉಕೊಂಡಿರುವ ಮಾಜಿ ಶಾಸಕರು, ಸೂಲಿಬೆಲೆಯಾಗಲಿ, ಅನಂತ್ಕುಮಾರ್ ಹೆಗ್ಗಡೆಯಾಗಲಿ ನಾಥೂರಾಮ್ ಗೂಡ್ಸೆ ಮನಸ್ಥಿತಿಯಿಂದ ಹೊರಬಂದಿಲ್ಲ. ಇವೇ ಮನಸ್ಥಿತಿಗಳು ಮಲ್ಲಿಕಾರ್ಜುನ ಖರ್ಗೆಯವರ ಮನೆ ಸುತ್ತಾ ಓಡಾಡಿಕೊಂಡು ಅವರಿಗೆ ತೊಂದರೆ ಕೊಡುವ ಕೆಲಸ ಮಾಡಿದ್ದವು ಎಂದರು.
ತಿರುಪತಿ ವೆಂಕಟರಮಣ ಸ್ವಾಮಿಯ ನಾಮದ ಶೈಲಿಯಲ್ಲಿ ಕಾಣುವ ಇಎಸ್ಐ ಆಸ್ಪತ್ರೆಯ ಕಟ್ಟಡವನ್ನು ಖರ್ಗೆ ಎನ್ನುವ ಹೆಸರಿನಂತೆ ಕಾಣುತ್ತದೆ ಎಂದು ಹೇಳುತ್ತಿದ್ದೀರಿ. ನೀವು ಮೊದಲು ಕನ್ನಡ ವರ್ಣಮಾಲೆಯಲ್ಲಿ ಖರ್ಗೆ ಹೇಗೆ ಬರುತ್ತದೆ ಎಂದು ತಿಳಿದುಕೊಳ್ಳಿ ಎಂದ ಅವರು, ‘ನೀವು ಕಾರವಾರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ಗೆ ಆಕಾಂಕ್ಷಿಯಾಗಿದ್ದರೆ, ಹೋಗಿ ಅಮಿತ್ ಶಾರವರಿಗೋ, ನಡ್ಡಾರವರಿಗೋ, ಮೋದಿಯವರಿಗೊ ಅಡ್ಡಬಿದ್ದರೆ ನಿಮಗೆ ಟಿಕೆಟ್ ಸಿಗಬಹುದು. ಸುಮ್ಮನೆ ಖರ್ಗೆಯವರನ್ನು ಟೀಕೆ ಮಾಡುವುದು ಬಿಡಿ. ನೀವು ಮೊದಲು ಈ ದೇಶದ ಪಾಠ ಕಲಿತುಕೊಳ್ಳಿ. ನಾಗಪುರದ ನಿಮ್ಮ ಸಂಘ ಪರಿವಾರದಲ್ಲಿ 52 ವರ್ಷಗಳ ಕಾಲ ಭಾರತದ ತ್ರಿವರ್ಣ ಧ್ಜಜವನ್ನು ಹಾರಿಸಿರಲಿಲ್ಲ’ ಎಂದರು.
ಇಎಸ್ಐ ಆಸ್ಪತ್ರೆಯ ಕಟ್ಟಡವೇನಾದರೂ ಕನ್ನಡ ವರ್ಣಮಾಲೆಯ ಖರ್ಗೆ ಅನ್ನುವ ಅಕ್ಷರಗಳನ್ನು ಹೋಲುವ ರೂಪದಲ್ಲಿ ನಿರ್ಮಿತವಾಗಿದ್ದರೆ ನಾನು ಬಿಜೆಪಿಯ ದೊಡ್ಡ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರ ಮನೆಯ ಶೌಚಾಲಯ ಶುಚಿಗೊಳಿಸಲು ಸಿದ್ಧನಿದ್ದೇನೆ. ಇಲ್ಲವಾದರೆ ಚಕ್ರವರ್ತಿ ಸೂಲಿಬೆಲೆಯವರೇ ನೀವು ಖರ್ಗೆಯವರ ಮನೆ ಶೌಚಾಲಯವನ್ನು ಶುಚಿಗೊಳಿಸುತ್ತೀರಾ? ಎಂದು ರಮೇಶ್ ಬಾಬು ಸವಾಲು ಹಾಕಿದರು. ನಿಮಗೆ ಸೈದ್ಧಾಂತಿಕವಾಗಿ ಖರ್ಗೆಯವರನ್ನು ಎದುರಿಸುವ ಶಕ್ತಿ ಇಲ್ಲದಿದ್ದರೆ ನಿಮ್ಮ ಸೋಲನ್ನು ಒಪ್ಪಿಕೊಳ್ಳಿ ಎಂದವರು ಛೇಡಿಸಿದರು.
























































