ಕೋಲಾರ: ಮಾದಕ ಸೇವನೆ ಯಾರೇ ಮಾಡಿದರೂ ತಪ್ಪೇ. ಚಿತ್ರರಂಗವಿರಲೀ, ಅಥವಾ ಇನ್ನಲ್ಲೇ ಇರಲೀ ಜಾಲದಲ್ಲಿರುವ ಕಬ್ಬಿಣದ ಕೈಗಳನ್ನು ಸರ್ಕಾರ ತುಂಡರಿಸುವ ಕೆಲಸ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡ್ರಗ್ ಮಾಫಿಯಾ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಚಿತ್ರನಟಿ ರಾಗಿಣಿಯಾಗಲೀ ಯಾರೇ ಆಗಲೀ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರೂ ಕೂಡ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗಬಾರದು ಎಂದರು.
ನಮ್ಮ ಕಾಲಕ್ಕೂ ನಮ್ಮ ಮಕ್ಕಳ ಕಾಲಕ್ಕೂ ಜನರೇಷನ್ ಬದಲಾಗುತ್ತಿದೆ. ಚಿತ್ರರಂಗವೂ ಬದಲಾಗಿದೆ ಅಂದಮಾತ್ರಕ್ಕೆ ದುಶ್ಚಟಕ್ಕೆ ಬಲಿಯಾಗುವುದಾಗಲೀ ವ್ಯಸನಿಗಳಾಗುವುದಾಗಲೀ ಮಾಡಬಾರದು. ತಪ್ಪು ಯಾರೂ ಮಾಡಿದ್ದಾರೆ ಎನ್ನುವುದು ಜನರಿಗೆ ತನಿಖೆಯಿಂದ ಗೊತ್ತಾಗಲಿದೆ. ತನಿಖೆಗೂ ಮುನ್ನ ಸುಕಾಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.























































