ಮಂಗಳೂರು: ತಾನೊಬ್ಬ ಛಲಗಾರ. ‘ಮನಸಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗದು’ ಎಂಬ ಸೂತ್ರ ಇವರದ್ದು. ಹಾಗಾಗಿಯೇ ಸಾಧಿಸುವ ಹಂಬಲ ಇರುವವರ ಬಗ್ಗೆ ಇವರಿಗೆ ಎಲ್ಲಿಲ್ಲದ ಅಕ್ಕರೆ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಶೋಷಿತರ, ಬಡಪಾಯಿಗಳ, ಕುಗ್ರಾಮಗಳ ಜನರ ನೆರವಿಗೆ ಧಾವಿಸಿ ಕೆಲಸ ಮಾಡುವ ಡಾ.ಗೋವಿಂದ ಬಾಬು ಪೂಜಾರಿ ಅವರು ಇದೀಗ ಅಸಾಮಾನ್ಯ ಸಾಧಕನೆನಿಸಿರುವ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವು ನೀಡಿ ಗಮನಸೆಳೆದಿದ್ದಾರೆ.
ಕೈ ಇಲ್ಲದೆ ಕಾಲಿನಲ್ಲೇ ಪಿಯುಸಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿರುವ ಕೌಶಿಕ್ನ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡಿರುವ ಗೋವಿಂದ ಬಾಬು ಪೂಜಾರಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಾಣಿಜ್ಯ ವಿಷಯದಲ್ಲಿ ಪಿಯುಸಿ ಕಲಿತಿರುವ ಕೌಶಿಕ್ ಈ ಬಾರಿಯ ಪರೀಕ್ಷೆಯಲ್ಲಿ 524 ಅಂಕಗಳನ್ನು ಪಡೆದು ಶಹಬ್ವಾಸ್ಗಿರಿ ಗಿಟ್ಟಿಸಿಕೊಂಡಿದ್ದಾನೆ. ಆದೂ ಕೂಡಾ ಪರೀಕ್ಷೆಯನ್ನು ಎಲ್ಲರಂತೆ ಕೈಯಲ್ಲಿ ಬರೆಯಲಾಗದೆ ಕಾಲಿನಲ್ಲೇ ಬರೆದಿರುವ ಕೌಶಿಕ್ ಈ ಶ್ರೇಷ್ಠತೆಗೆ ಪಾತ್ರನಾಗಿದ್ದಾನೆ. ಆದರೆ, ಬಂಟ್ವಾಳದ ರಾಜೇಶ್ ಆಚಾರ್ಯ-ಜಲಜಾಕ್ಷಿ ದಂಪತಿಯ ಪುತ್ರ ಕೌಶಿಕ್ನ ಈ ಸಾಧನೆಗೆ ಅಭಿನಂದನೆಗಳ ಹೊಳೆಯೇ ಹರಿದು ಬಂತಾದರೂ ಮುಂದಿನ ವ್ಯಾಸಾಂಗದ ಹೇಗೆ ಎಂಬುದು ಹೆತ್ತವರ ಚಿಂತೆಯಾಗಿತ್ತು.
ಈ ಬಗ್ಗೆ ಪ್ರತಿಷ್ಠಿತ ChefTalk ಸಂಸ್ಥೆಯ ಮುಖ್ಯಸ್ಥರೂ ಆದ ಸಾಮಾಜಿಕ ಕಾರ್ಯಕರ್ತ ಗೋವಿಂದ ಬಾಬು ಪೂಜಾರಿ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿದಿದ್ದೇ ತಡ, ಡಾ.ಪೂಜಾರಿಯವರು ತಾವೇ ಕೌಶಿಕ್ ಬಳಿ ಧಾವಿಸಿ ನೆರವಿನ ಹಸ್ತ ಚಾಚಿದ್ದಾರೆ. ಈ ವಿದ್ಯಾರ್ಥಿಯ ಶಿಕ್ಷಣಕ್ಕೆ ಮತ್ತಷ್ಟು ನೆರವು ನೀಡುವ ಭರವಸೆ ನೀಡಿದ ಅವರು, ಈತನ ಮುಂದಿನ ಕಲಿಕಗೆ ಸಹಕಾರಿಯಾಗಲೆಂದು ದುಬಾರಿ ಲ್ಯಾಪ್ಟಾಪ್ನ್ನೂ ನೀಡಿ ಪ್ರೋತ್ಸಾಹಿಸಿದರು.
ಕೌಶಿಕ್ ಮಾತ್ರವಲ್ಲ, ಈ ವರ್ಷ ಅನೇಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತಮ್ಮ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ನೆರವು ನೀಡುತ್ತಿರುವುದಾಗಿ ಡಾ.ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.
ಸಾಮಾಜಿಕ ಕೈಂಕರ್ಯಕ್ಕೆಂದೇ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿರುವ ಗೋವಿಂದ ಬಾಬು ಪೂಜಾರಿಯವರು ತಮ್ಮ ಸ್ವಂತ ದುಡಿಮೆಯ ಹಣದಿಂದಲೇ ಈ ಟ್ರಸ್ಟ್ ಮೂಲಕ ಜನರಿಗೆ ನೆರವು ನೀಡುತ್ತಿದ್ದಾರೆ.
ಬಿರು ಬೇಸಿಗೆಯ ಸಂದರ್ಭದಲ್ಲಿ ಜೀವಜಲಕ್ಕಾಗಿ ಜನ ಪರದಾಡುತ್ತಿದ್ದುದನ್ನು ಗಮನಿಸಿದ್ದ ಈ ಪೂಜಾರಿ, ಉಡುಪಿ ಜಿಲ್ಲೆಯ ಹಲವು ಗ್ರಾಮಗಳಿಗೆ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.
ಕಳೆದ ವರ್ಷ ಬಿರುಗಾಳಿ ಮಳೆಯ ಹೊಡೆತಕ್ಕೆ ಸಿಲುಕಿ ಮನೆ ಕಳೆದುಕೊಂಡ ಕರಾವಳಿ ತೀರದ ಹಲವು ಬಡ ಕುಟುಂಬದವರ ಮನೆಗಳನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿಪಡಿಸಿದ್ದಾರೆ.
ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗ ಕಲ್ಪಿಸಲೆಂದೇ ಹತ್ತಾರು ಕಂಪನಿಗಳನ್ಬು ಹುಟ್ಟುಹಾಕಿದ್ದಾರೆ.
ಮೀನುಗಾರರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ತಮ್ಮ ತವರಿನ ಮೀನುಗಾರರಿಗೆ ಮಾರುಕಟ್ಟೆ ಒದಗಿಸಲೆಂದೇ ನಾಡಿನಲ್ಲೇ ಮೊದಲೆಂಬಂತೆ ‘ಮೀನಿವ ಚಿಪ್ಸ್, ವೇಫರ್ಸ್’ ಫ್ಯಾಕ್ಟರಿ ಸ್ಥಾಪಿಸಿದ್ದಾರೆ.
ಹಲವಾರು ಬಡಕುಟುಂಬಗಳಿಗೆ ಮನೆಗಳನ್ನು ಕಟ್ಟಿ ದಾನ ಮಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ವೈದ್ಯಕೀಯ ನೆರವು ನೀಡಿರುವ ಪೂಜಾರಿಯವರು, ಹಲವಾರು ಮಂದಿಗೆ ತಮ್ಮ ಮನೆಯಲ್ಲೇ ವಸತಿ ವ್ಯವಸ್ಥೆ ಕಲ್ಪಿಸಿ ವೈದ್ಯಕೀಯ ನೆರವು ನೀಡಿದವರು.
ಉದ್ಯಮ ಆಕಾಂಕ್ಷಿ ಉತ್ಸಾಹಿ ಯುವಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಎಂಬ ಹಣಕಾಸು ಸಂಸ್ಥೆ ಕಟ್ಟಿ ಸಾವಿರಾರು ಮಂದಿಗೆ ನೆರವಾಗುತ್ತಿದ್ದಾರೆ.
ಪೌರ ಕಾರ್ಮಿಕರಿಗೂ ಆರೋಗ್ಯ, ಊಟೋಪಚಾರ, ರೇಷನ್ ವ್ಯವಸ್ಥೆ ಮೂಲಕ ನೆರವು ನೀಡುತ್ತಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕೆ ಸೌಲಭ್ಯ ಮುಂದುವರಿಸುವ ಉದ್ದೇಶದಿಂದ ಗೋವಿಙದ ಪೂಜಾರಿಯವರು ಕರಾವಳಿಯಲ್ಲಿ ಸುಸಜ್ಜಿತ ಶಾಲೆಯನ್ನು ಆರಂಭಿಸುವ ಪ್ರಯತ್ನದಲ್ಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ, ಅಸಂಖ್ಯ ಕುಟುಂಬಗಳಿಗೆ ಆಸರೆಯಾಗಿ, ಹತ್ತಾರು ಕ್ಷೇತ್ರಗಳಲ್ಲಿನ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿರುವ ಏಷ್ಯಾದ ಪ್ರತಿಷ್ಠಿತ ವೈದ್ಧಿಕ ವಿಶ್ವವಿದ್ಯಾಲಯವೊಂದು ಗೋವಿಂದ ಬಾಬು ಪೂಜಾರಿಯವರನ್ನು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.