ಬೆಂಗಳೂರು: ಅಲ್ಪಸಂಖ್ಯಾತ ಮಾರ್ವಾಡಿ ಸಮುದಾಯದವರೆಂದು ಹೇಳಿಕೊಂಡಿರುವ ಲೆಹರ್ ಸಿಂಗ್ ಅವರು ಮುಸಲ್ಮಾನ್ ಸಮುದಾಯದ ಬಗ್ಗೆ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸುತ್ತಿರುವುದು ಅಚ್ಚರಿಯ ಸಂಗತಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ಜಸ್ಟಿಸ್ ಆನಂದ್ ಅವರ ವರದಿಯನ್ನು ಇಟ್ಟುಕೊಂಡು ಲೆಹರ್ ಸಿಂಗ್ ದೊಡ್ಡಮಟ್ಟದ ನಾಟಕ ಆಡಲು ಪ್ರಯತ್ನ ಪಡುತ್ತಿದ್ದಾರೆ ಎಂದೂ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.
ಲೆಹರ್ ಸಿಂಗ್ ಅವರು ರಾಜ್ಯ ಬಜೆಟ್ ಬಗ್ಗೆ ಟೀಕಿರುವ ವೈಖರಿ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಬಾಬು, ರಾಜ್ಯಸಭಾ ಸದಸ್ಯರಾದ ರಾಜಸ್ಥಾನಿ ಲೆಹರ್ ಸಿಂಗ್ ರವರು ಕಾಂಗ್ರೆಸ್ ಸರ್ಕಾರದ ಮೇಲೆ ಅನೇಕ ಆರೋಪಗಳನ್ನು ಮಾಡಿರುತ್ತಾರೆ. ತಾವೇ ಸ್ವತಃ ಅಲ್ಪಸಂಖ್ಯಾತ ಮಾರ್ವಾಡಿ ಸಮುದಾಯದವರೆಂದು ಹೇಳಿಕೊಂಡಿರುವ ಲೆಹರ್ ರವರು ಮುಸಲ್ಮಾನ್ ಸಮುದಾಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಸ್ಟಿಸ್ ಆನಂದ್ ಆಯೋಗದ ವಖ್ಫ್ ಆಸ್ತಿಗೆ ಸಂಬಂಧಪಟ್ಟಂತಹ ವರದಿಯನ್ನು ನಿಷ್ಕ್ರಿಯ ಗೊಳಿಸಿದೆ ಎಂದು ಆರೋಪಿಸಿರುವ ಇವರು, ಪ್ರಜ್ಞಾಪೂರ್ವಕವಾಗಿ ಕೇಂದ್ರ ಸರ್ಕಾರ ಸಾಚಾರ್ ಕಮಿಟಿಯ ವರದಿಯನ್ನು ಮೂಲೆಗೆ ತಳ್ಳಿರುವ ಕುರಿತು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಿಲ್ಲ. ಯಾವಾಗ ಈ ದೇಶದಲ್ಲಿ ಜಸ್ಟಿಸ್ ಸಾಚಾರ್ ಕಮಿಟಿ ವರದಿ ಲೋಕಸಭೆಯಲ್ಲಿ ಮಂಡನೆ ಆಯಿತು, ಯಾವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ಇದುವರಿಗೆ ಜಸ್ಟಿಸ್ ಸಾಚಾರ್ ಕಮಿಟಿ ವರದಿಯನ್ನು ಯಾತವತ್ತಾಗಿ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವುದಿಲ್ಲ ಎಂಬುದನ್ನು ಹೇಳಲಿ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ವಖ್ಫ್ ಕಾಯ್ದೆಯನ್ನು ವಿರೋಧಿಸಿ ಸದನದಲ್ಲಿ ಗೊತ್ತುವಳಿಯನ್ನು ಅಂಗೀಕರಿಸುತ್ತಾರೆ ಎಂಬ ಕಾರಣದಿಂದ ಈ ದಿನ ಜಸ್ಟಿಸ್ ಆನಂದ್ ಅವರ ವರದಿಯನ್ನು ಇಟ್ಟುಕೊಂಡು ಲೆಹರ್ ಸಿಂಗ್ ರವರು ದೊಡ್ಡಮಟ್ಟದ ನಾಟಕ ಆಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮುಸಲ್ಮಾನ್ ಜನಾಂಗದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಯಾವ ಕಾರಣಕ್ಕೆ ಒಬ್ಬ ರಾಜ್ಯಸಭಾ ಸದಸ್ಯರಾಗಿ ಸಾಚಾರ್ ಕಮಿಟಿಯ ವರದಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಲ್ಲ ಮತ್ತು ಹಾಕುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಕರ್ನಾಟಕದಲ್ಲಿ ಅವರದೇ ಪಕ್ಷದ ನಾಯಕರಾದ ಮಾನಪ್ಪಾಡಿರವರು ವಖ್ಫ್ ಆಸ್ತಿಗೆ ಸಂಬಂಧಪಟ್ಟಂತೆ ಕೊಟ್ಟ ವರದಿಯ ಬಗ್ಗೆ ಚಕಾರವನ್ನು ಎತ್ತುತ್ತಿಲ್ಲ. ಬಿಜೆಪಿಯ ಮಾನಪ್ಪಾಡಿರವರು ಸನ್ಮಾನ್ಯ ಬಿ.ಎಸ್ ಯೆಡಿಯೂರಪ್ಪ ನವರ ಮೇಲೆ ಸನ್ಮಾನ್ಯ ಬಿ.ವೈ.ವಿಜಯೇಂದ್ರರವರ ಮೇಲೆ ಗುರುತರವಾದ ಆರೋಪಗಳನ್ನು ಮಾಡಿ, ವಖ್ಫ್ ಆಸ್ತಿಯನ್ನು ಬಿಜೆಪಿ ನಾಯಕರು ಸಹ ಕಬಳಿಸಿರುತ್ತಾರೆ ಎನ್ನುವ ನೇರ ಆರೋಪವನ್ನು ಮಾಡಿರುತ್ತಾರೆ ಮತ್ತು ಈ ಸಂಬಂಧ ವಿಡಿಯೋಗಳನ್ನು ಬಿಡುಗಡೆ ಮಾಡಿರುತ್ತಾರೆ. ವ್ಯವಸ್ಥಿತವಾಗಿ ಪ್ರಜ್ಞಾಪೂರ್ವಕ ವಾಗಿ ತಮ್ಮ ಮರೆಗುಳಿತನವನ್ನು ಈ ವಿಚಾರದಲ್ಲಿ ಲೆಹರ್ ಸಿಂಗ್ ವ್ಯಕ್ತಪಡಿಸುತ್ತಿದ್ದಾರೆ ಎಂದು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ವಕ್ಫ್ ಆಸ್ತಿಗೆ ಸಂಬಂಧಪಟ್ಟಂತೆ ಅಂದಿನ ಉಪ ಲೋಕಾಯುಕ್ತರಾದಂತಹ ಜಸ್ಟಿಸ್ ಆನಂದ್ ರವರು ನೀಡಿರುವ ವರದಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲಿಲ್ಲ, ಈ ವರದಿಗೆ ಸಾರ್ವಜನಿಕರ ಹಣವನ್ನು ವ್ಯಯ ಮಾಡಲಾಗಿದೆ ಎನ್ನುವ ಲೆಹರ್ ಸಿಂಗ್ ರವರು ಅದೇ ಮಾನದಂಡವನ್ನು ಜಸ್ಟಿಸ್ ಸಾಚಾರ್ ವರದಿಗೆ ಸಂಬಂಧಪಟ್ಟಂತೆ ಹೇಳಲು ಬಯಸುತ್ತಾರೆಯೇ? ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಲಾಟರಿ ಮುಖಾಂತರ ರಾಜಕೀಯ ಅಧಿಕಾರಗಳನ್ನು ಸಂಪಾದನೆ ಮಾಡಿದ ಅನೇಕ ರಾಜಕಾರಣಿಗಳನ್ನು ಕಾಣಬಹುದು. ಅಂತವರಲ್ಲಿ ಇವರು ಸಹ ಒಬ್ಬರು! ಇವರು ಬೆಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ ಯಾವ ರೀತಿಯ ವ್ಯಾಪಾರೋದ್ಯಮವನ್ನು ಮಾಡಿಕೊಂಡಿದ್ದರು ಎಂಬುದನ್ನು ಜನರಿಗೆ ಸ್ಪಷ್ಟ ಪಡಿಸಲಿ. ವಾಣಿವಿಲಾಸ ರಸ್ತೆಯಲ್ಲಿ ಇವರು ಒಂದು ಖಾಸಗಿ ವೈದ್ಯಕೀಯ ಉಪಕರಣಗಳ ಮಾರಾಟದ ಕಂಪನಿಯನ್ನು ಇಟ್ಟುಕೊಂಡು ಸರ್ಕಾರದ ಗುತ್ತಿಗೆಗಳನ್ನು ಪಡೆದಿದ್ದು ಸುಳ್ಳೇ? ಒಂದು ಕಂಪನಿಯ ಆರೋಪಗಳು ಇದ್ದು ಇದು ನಿಜವೇ ಸುಳ್ಳೇ? ಈ ಕಂಪನಿಯ ಮುಖಾಂತರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಿಂದಿನ ಕುಮಾರಸ್ವಾಮಿ ರವರ ಸಮಿಶ್ರ ಸರ್ಕಾರದಲ್ಲಿ ವಸ್ತುಗಳನ್ನು ದಾಸ್ತಾನುಗಳನ್ನು ಸರಬರಾಜು ಮಾಡಿ ಅವ್ಯವಹಾರ ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಒತ್ತಾಯಿಸುವರೇ? ಸದರಿ ಕಂಪನಿಯಲ್ಲಿ ಇವರ ಯಾವುದೇ ಹಿತಾಸಕ್ತಿ ಪಾಲುದಾರಿಕೆ ಇರಲಿಲ್ಲವೆಂಬುದನ್ನು ಸ್ಪಷ್ಟಪಡಿಸಿ ರಾಜ್ಯ ಸರ್ಕಾರಕ್ಕೆ ನ್ಯಾಯಾಂಗ ತನಿಖೆ ಮಾಡಲು ಒತ್ತಾಯಿಸುವರೇ? ಎಂದೂ ಪ್ರಶ್ನಿಸಿದ್ದಾರೆ.
ಜಸ್ಟಿಸ್ ಆನಂದ್ ರವರ ವರದಿಯನ್ನು ಲೋಕಸಭಾ ಅಧ್ಯಕ್ಷರಿಗೆ ಮತ್ತು ಕೇಂದ್ರದ ಸಚಿವರಿಗೆ ಮತ್ತು ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಯ ಮುಂದೆ ಮಂಡಿಸುವುದಾಗಿ ಹೇಳಿರುತ್ತಾರೆ. ಅವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ಸಾಚಾರ್ ಕಮಿಟಿಯ ವರದಿ ಉಚಿತವಾಗಿ ಅವರಿಗೆ ಸಿಗಬಹುದು. ಅದನ್ನು ಸಹ ಪಡೆದುಕೊಂಡು ಲೋಕಸಭಾ ಸ್ಪೀಕರ್ ಅವರಿಗೆ ಅವರ ಪಕ್ಷದ ಅಧ್ಯಕ್ಷರಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ವರದಿಯ ಪ್ರತಿಯನ್ನು ನೀಡಿ ಸಾರ್ವಜನಿಕರ ಮತ್ತು ಮುಸ್ಲಿಮರ ಹಿತಾಸಕ್ತಿಯ ಕಾರಣಕ್ಕಾಗಿ ಸಾಚಾರ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಕೋರಬೇಕಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಅವರು ಮನವಿ ಮಾಡಿದ್ದಾರೆ.
ಅಲ್ಪಸಂಖ್ಯಾತರಾದ ಲೆಹರ್ ಸಿಂಗ್ ರವರು ಇನ್ನೊಂದು ಅಲ್ಪಸಂಖ್ಯಾತರ ಸಮುದಾಯದ ಬಗ್ಗೆ ಇಟ್ಟಿರುವ ಕಾಳಜಿಯನ್ನು ನಾವು ಪ್ರಶಂಸಿರುತ್ತೇವೆ. ಆದರೆ ಈ ಕಾಳಜಿ ರಾಜಕೀಯ ಕಾರಣಕ್ಕೆ ಸೀಮಿತವಾಗದೆ ಸಾರ್ವಜನಿಕ ಹಿತಾಸಕ್ತಿಯಿಂದ ನಡೆಯಬೇಕಾಗಿರುವುದರಿಂದ ಇಂತಹ ತಂತ್ರಗಾರಿಕೆ ಮಾತುಗಳನ್ನು ಬಿಟ್ಟು ಅಥವಾ ಶಾಮೀಲುತನದ ಮಾತುಗಳನ್ನು ಬಿಟ್ಟು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಕರ್ನಾಟಕ ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಈ ನೆಲದ, ಈ ಮಣ್ಣಿನ, ಈ ಜಲದ ರಕ್ಷಣೆಗಾಗಿ ಕಿಂಚಿತ್ತಾದರು ಗೌರವ ಸಲ್ಲಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ನಾಟಕಕಾರ ಲೆಹರ್ ಸಿಂಗರನ್ನು ಅಗ್ರಹ ಪೂರ್ವಕವಾಗಿ ಒತ್ತಾಯಿಸುತ್ತದೆ ಎಂದು ರಮೇಶ್ ಬಾಬು ಕುಟುಕಿದ್ದಾರೆ.