ಬೆಂಗಳೂರು: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಡಿಜಟಲೀಕರಣ ಮೂಲಕ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳ ರಕ್ಷಣೆಗೆ ಮುಂದಾಗಿದೆ. ಸಾರಿಗೆ ಸಂಸ್ಥೆಯ ಆಸ್ತಿಗಳ ಒತ್ತುವರಿ ತಡೆಯುವುದು, ಒತ್ತುವರಿ ಆಗಿರುವುದನ್ನು ಗುರುತಿಸುವುದು, ಆಸ್ತಿಗಳ ವಾಸ್ತವತೆ ತಿಳಿದುಕೊಳ್ಳುವುದು, ಕೆಲವಡೆ ಸಮರ್ಪಕ ದಾಖಲೆ ನಿರ್ವಹಣೆ ಕೊರತೆ, ಅಧಿಕಾರಿಗಳ ವರ್ಗಾವಣೆಯಿಂದಾಗಿ ಆಸ್ತಿಗಳ ಮಾಹಿತಿ ಇಲ್ಲದಿರುವುದು. ಇತರೆ ಕಾರಣಗಳಿಂದಾಗಿ ಆಸ್ತಿಗಳು ಖಾಸಗಿಯವರ ಪಾಲಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ.
ಕಂದಾಯ ಇಲಾಖೆಯ ಲ್ಯಾಂಡ್ ಬೀಟ್ ಆ್ಯಪ್ ಬಳಸಿ ಆಸ್ತಿಗಳ ನಕಾಶೆ, ದಾಖಲೆ ಜತೆ ಸರ್ವೆ ಮಾಡಲಾಗುತ್ತಿದೆ. ಸಂಸ್ಥೆಯ ಆರು ಜಿಲ್ಲೆಗಳಲ್ಲಿ 255 ಆಸ್ತಿಗಳ ಒಟ್ಟು 683.20 ಎಕರೆ ಭೂಮಿ ಹೊಂದಿದ್ದು ಮೌಲ್ಯ ರೂ. 2500 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೆಲವೆಡೆ ಒತ್ತುವರಿಯಾಗಿದೆ, ಇನ್ನು ಹಲವೆಡೆ ಒತ್ತುವರಿ ಹಂತದಲ್ಲಿವೆ. ಇದಕ್ಕೆ ಕಡಿವಾಣ ಹಾಕಲು ನಿವೃತ್ತ ತಹಸೀಲ್ದಾರರ ನೆರವು ಪಡೆದು, ಸಂಸ್ಥೆಯ ಕಾಮಗಾರಿ ಇಲಾಖೆಯ ಎಂಜಿನಿಯರ್ ಗಳಿಗೆ ತರಬೇತಿ ನೀಡಿ ಸರ್ವೆ ಮಾಡಿಸಲಾಗುತ್ತಿದೆ.
ಮೊದಲ ಹಂತದಲ್ಲಿ 143 ಆಸ್ತಿಗಳಲ್ಲಿ 109 (ಶೇ.76.22 ಆಸ್ತಿಗಳ ಸರ್ವೆ ಮುಗಿದಿದೆ. ಎರಡನೇ ಸರ್ವೆ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.
ವಾಕರಾಸಂಸ್ಥೆಯಂತೆ ಆಸ್ತಿಗಳ ಸರ್ವೆ ಮತ್ತು ದಾಖಲೆಗಳ ಪರಿಶೀಲನೆ ಕೈಗೆತ್ತಿಕೊಳ್ಳಲು ಎಲ್ಲಾ ಸಾರಿಗೆ ನಿಗಮಗಳಿಗೆ ಸೂಚನೆ ನೀಡಲಾಗಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳ ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಆಸ್ತಿ ಅತಿಕ್ರಮಣವಾಗುತ್ತದೆ. ಸಂಸ್ಥೆಯ ಒಡೆತನದ ಆಸ್ತಿಯ ಸಂರಕ್ಷಣೆ ನಮ್ಮ ಜವಾಬ್ದಾರಿ ಆಗಿರಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿರ್ದೇಶನ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






















































