ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕೋಲಾಹಲ ಸೃಷ್ಟಿಸಿದ್ದ ‘ಸೌಜನ್ಯ ಕೊಲೆ ಪ್ರಕರಣ’ ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿಧ್ವನಿಸಿದೆ. ಸೌಜನ್ಯ ಪರ ನ್ಯಾಯಕ್ಕಾಗಿ ಹೋರಾಟ ನಡೆಸಿರುವ ಸಂಘಟನೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ‘ನೋಟಾ’ ಚಲಾಯಿಸಲು ನಿರ್ಧರಿಸಿವೆ. ಈ ಸಂಬಂಧ ಬೃಹತ್ ನೋಟಾ ಅಭಿಯಾನ ಪ್ರಕ್ರಿಯೆಗೆ ಮುನ್ನುಡಿ ಬರೆಯಲಾಗಿದೆ.
ರಾಜಕೀಯ ಪಕ್ಷಗಳ ಹಾಗೂ ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ನೋಟಾ ಅಭಿಯಾನ ನಡೆಸಲಾಗುತ್ತದೆ ಎಂದು ಸಮಿತಿಯ ಮುಖಂಡ ಗಿರೀಶ್ ಮಟ್ಟನ್ನನವರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಅವರು, ಸೌಜನ್ಯ ಕೊಲೆ ಪ್ರಕರಣ ನಡೆದು 11 ವರ್ಷ ಕಳೆದರೂ ಯಾವುದೇ ರಾಜಕೀಯ ಪಕ್ಷಗಳು ನ್ಯಾಯ ಕೊಡಿಸುವ ವಿಚಾರದಲ್ಲಿ ಸಮರ್ಪಕವಾಗಿ ಸ್ಪಂದಿಸಿಲ್ಲ. ಹಾಗಾಗಿ ಈ ಬಾರಿ ನೋಟಕ್ಕೆ ಮತಚಲಾಯಿಸಿ ಗಮನ ಸೆಳೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಈ ನೋಟಾ ಅಭಿಯಾನ ಹಮ್ಮಿಕೊಳ್ಳುತ್ತದೆ ಎಂದು ವಿವರಿಸಿದ ಅವರು, ಈ ತಿಂಗಳ 24ರಂದು ಸುಳ್ಯದಲ್ಲಿ ನೋಟ ಜನಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಗಿರೀಶ್ ಮಟ್ಟನ್ನನವರ್ ತಿಳಿಸಿದರು.
ಸೌಜನ್ಯ ಹೋರಾಟದಿಂದ ಯಾರಿಗೆ ಲಾಭ? ಯಾರಿಗೆ ನಷ್ಠ?
ಸೌಜನ್ಯ ಹೋರಾಟದಲ್ಲಿ ಬಹುಪಾಲು ಮಂದಿ ಬಿಜೆಪಿ ನಾಯಕರೇ ಮುಂದಾಳುತ್ವ ವಹಿಸಿದ್ದರು. ಹಾಗಾಗಿ ಈ ನೋಟಾ ಅಭಿಯಾನವು ಬಿಜೆಪಿ ಪಾಲಿಗೆ ಸವಾಲಾಗಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.