ಚಿಕ್ಕಮಗಳೂರು: ಇಹಲೋಕ ತ್ಯಜಿಸಿರುವ ಅರೆಸ್ಸೆಸ್ ಕಾರ್ಯಕರ್ತ, ಪ್ರಗತಿಪರ ಕೃಷಿಕ ಚಿಕ್ಕಮಗಳೂರಿನ ತಿಮ್ಮೇಗೌಡರ ನಿಧನಕ್ಕೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ತಂದೆ ತಿಮ್ಮೇಗೌಡರು (92 ವರ್ಷ) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಶನಿವಾರ ಅವರು ಇಹಲೋಕ ತ್ಯಜಿಸಿದರು.
ಸಂಘಪರಿವಾರದ ಚಟುವಟಿಕೆಗಳಿಗಾಗಿ ತಮ್ಮ ಮಕ್ಕಳನ್ನು ಸೇನಾನಿಗಳಾಗಿ ಕಳುಹಿಸಿಕೊಟ್ಟವರು ತಿಮ್ನೇಗೌಡರು. ಅವರ ನಿಧನದ ಸುದ್ದಿ ಬಿಜೆಪಿ ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರಲ್ಲೂ ದುಃಖ ಮಡುಗಟ್ಟುವಂತೆ ಮಾಡಿದೆ. ಮಾಜಿ ಪ್ರಧಾನಿ ದೇವೇಗೌಡರಾದಿಯಾಗಿ ಎಲ್ಲಾ ಪಕ್ಷಗಳ ರಾಜಕೀಯ ನಾಯಕರ ಜೊತೆ ಒಡನಾಟ ಹೊಂದಿದ್ದ ತಿಮ್ಮೇಗೌಡರ ನಿಧನಕ್ಕೆ ಕಂಬನಿಯ ಮಹಾಪೂರವೇ ಹರಿದು ಬಂತು.
ತಿಮ್ಮೇಗೌಡರ ಪಾರ್ಥೀವ ಶರೀರವನ್ನು ಚಿಕ್ಕಮಗಳೂರು ಸಮೀಪದ, ಸ್ವಗ್ರಾಮ ಚಿಕ್ಕಮಾಗರವಳ್ಳಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕಳೇದ ರಾತ್ರಿಯಿಂದಲೇ ಸಾವಿರಾರು ಮಂದಿ ಅಭಿಮಾನಿಗಳು, ಬಂಧುಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಮುನಿರತ್ನ, ಬೈರತಿ ಬಸವರಾಜ್ ಸಹಿತ ಮಂತ್ರಿಗಳು, ಕುಮಾರಸ್ವಾಮಿ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರನೇಕರು ಸಿ.ಟಿ.ರವಿ ಅವರ ನಿವಾಸದಲ್ಲಿ ಅವರ ತಂದೆಯ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದರು. ಸಿ.ಟಿ.ರವಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.





















































