ಬೆಂಗಳೂರು: ಕೇಂದ್ರದಲ್ಲಿ ಸಚಿವಸ್ಥಾನ ಸಿಗದೇ ಹತಾಶರಾಗಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಇದೀಗ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಯ ಕನಸು ಕಾಣುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ಲೋಕಸಭಾ ಸದಸ್ಯ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕರೂ ಆದ ರಮೇಶ್ ಬಾಬು, ಕೇಂದ್ರದಲ್ಲಿ ಮಂತ್ರಿ ಸ್ಥಾನ ಬಯಸಿ ಅವಕಾಶ ಸಿಗದೆ ಹತಾಶರಾಗಿರುವ ರಾಜ್ಯದ ಕೆಲವು ಬಿಜೆಪಿ ಸಂಸದರು ಇಂತಹ ಹಳೆಯ ಡೈಲಾಗ್ ಗಳನ್ನು ಪಠಿಸುವ ಮೂಲಕ ರಾಜ್ಯದ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಬಹುಶಃ ಇಂತಹ ಹೇಳಿಕೆ ನೀಡಿದರೆ ಅವರ ಮಗನಿಗೆ ಶಿಗ್ಗಾವಿಯ ವಿಧಾನಸಭಾ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಆಸೆ ಹುಟ್ಟಿಸಿ ಅವರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿರಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.
NDA ಪಾದಗಳಿಗೆ ಶರಣು..?
ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತತ್ತರಿಸಿ ಹೋಗಿರುವ ಭಾರತೀಯ ಜನತಾ ಪಕ್ಷವು NDA ಪಾದಗಳಲ್ಲಿ ಶರಣಾಗಿರುತ್ತದೆ. ಜನತಾ ದಳ (ಯು) ಮತ್ತು ತೆಲುಗು ದೇಶಂ ಎಂಬ ಇಬ್ಬರು ಹೆಂಡತಿಯರನ್ನು ಸಂಭಾಳಿಸುವ ಅನಿವಾರ್ಯತೆ ಪ್ರಧಾನಿ ಮೋದಿಗೆ ಉಂಟಾಗಿದೆ. ಕರ್ನಾಟಕದ ಹತಾಶ ನಾಯಕರಾದ ಬಸವರಾಜ್ ಬೊಮ್ಮಾಯಿರವರು ತಮಗೆ ಶಕ್ತಿಯಿದ್ದರೆ ಕೇಂದ್ರದಲ್ಲಿ NDA ಸರ್ಕಾರ ಉಳಿಸಿಕೊಳ್ಳಲು ಅವರ ಪಕ್ಷದ ನಾಯಕರಿಗೆ ಮತ್ತು ಪ್ರಧಾನಿ ಮೋದಿರವರಿಗೆ ಸಲಹೆ ನೀಡಲಿ. ಕಾಲಕ್ಷೇಪ ಮಾಡಲು ಜೊತೆಗಾರರು ಬೇಕಾಗಿದ್ದಲ್ಲಿ ಕರ್ನಾಟಕದ ಮಾಜಿ ಮಂತ್ರಿ ಮತ್ತೊಬ್ಬ ಕೇಂದ್ರ ಸಚಿವ ಸ್ಥಾನದ ಅಪೇಕ್ಷಿತರಾದ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂತಹ ಸಮಾನ ಮನಸ್ಕರನ್ನು ಸೇರಿಸಿಕೊಳ್ಳಲಿ. ಇದನ್ನು ಬಿಟ್ಟು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಕರ್ನಾಟಕ ಜನರಿಗೆ ಮನರಂಜನೆ ನೀಡುವುದು ಬೇಡ ಎಂದು ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಇಂತಹದ್ದೇ ಹೇಳಿಕೆಯನ್ನು ನೀಡಿ ಈಗ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಡೀ ದೇಶದ ಜನ ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಕಡಿಮೆ ಸ್ಥಾನಗಳನ್ನು ನೀಡುವ ಮೂಲಕ ಮೋದಿಯನ್ನು ತಿರಸ್ಕರಿಸಿದ್ದಾರೆ. ಬಲವಂತದ ಮದುವೆಯ ಮೂಲಕ ಬಲವಂತದ ಸಂಸಾರವನ್ನು ಮಾಡುತ್ತಿರುವ ಕೇಂದ್ರ ಸರ್ಕಾರ ಪತನಗೊಂಡು ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಶೇಕಡಾವಾರು ಮತಕ್ಕಿಂತ ಲೋಕಸಭೆಯಲ್ಲಿ ಹೆಚ್ಚುವರಿ ಶೇಕಡಾ 2 ಮತಗಳನ್ನು ಮತ್ತು ಕಳೆದ ಚುನಾವಣೆಗಿಂತ ಹೆಚ್ಚುವರಿ 8 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಪಡೆದಿರುತ್ತದೆ. ಇಡೀ ದೇಶದಲ್ಲಿ ಶಾಸಕರ ವ್ಯಾಪಾರ ಮಾಡುತ್ತಿದ್ದ ಬಿಜೆಪಿಗೆ ಜನ ಕಡಿವಾಣ ಹಾಕಿರುತ್ತಾರೆ. ಈ ಸತ್ಯವನ್ನು ತಿಳಿದಿದ್ದೂ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಮೂಲಕ ಬಸವರಾಜ್ ಬೊಮ್ಮಯ್, ಜಗದೀಶ್ ಶೆಟ್ಟರ್ ಮತ್ತು ಗೋವಿಂದ ಕಾರಜೋಳ ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.





















































