ಬೆಂಗಳೂರು: ನರಗುಂದದಲ್ಲಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ‘ನರೇಂದ್ರಮೋದಿ ವಿಷದ ಹಾವು. ಆ ಹಾವಿನ ವಿಷ ನೆಕ್ಕಿದರೆ ಸತ್ತಂತೆ. ಮಲಗಿ ಬಿಡ್ತೀರಾ.’ ಎಂದಿದ್ದಾರೆ. ಈ ಹೇಳಿಕೆಯನ್ನು ಆಕ್ಷೇಪಿಸಿ ರಾಜ್ಯ ಬಿಜೆಪಿ ನಾಯಕರು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರೂ ಆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಜ್ಯದ ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಕರ್ನಾಟಕದ ಜನರು ವಿದ್ಯಾವಂತ, ಬುದ್ಧಿವಂತರು. ಯಾರೇನು ಮಾತನಾಡಿದ್ದಾರೆ ಎಂಬುದು ಕ್ಷಣದಲ್ಲಿ ಜನರನ್ನು ತಲುಪುತ್ತಿದೆ. ರಾಜ್ಯದ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ನಲ್ಲಿ ಖರ್ಗೆಯವರು ನೂರು ತಲೆಗಳ ರಾವಣ ಎಂದು ಹೇಳಿದ್ದರು. ಗುಜರಾತ್ನಲ್ಲಿ ಕಾಂಗ್ರೆಸ್ಸಿಗೆ ಅಡ್ರೆಸ್ಸಿಲ್ಲದ ಪರಿಸ್ಥಿತಿ ಬಂದಿದೆ. ಅದೇ ಪರಿಸ್ಥಿತಿ ಕರ್ನಾಟಕದಲ್ಲಿ ಬರಲಿದೆ ಎಂದು ಎಚ್ಚರಿಸಿದರು.
ಖರ್ಗೆಯವರು ಕೇವಲ ಕರ್ನಾಟಕದ ನಾಯಕರಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರು. ಅವರ ಮಾತನ್ನು ದೇಶ ವಿದೇಶದಲ್ಲಿ ಕೇಳಿಸಿಕೊಳ್ಳುತ್ತಾರೆ. ವಿದೇಶದ ಜನರು ಭಾರತದ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಮೋದಿಯವರು ಈ ದೇಶದ ಪ್ರಧಾನಿ. ಅವರ ಬಗ್ಗೆ ದೇಶವಾಸಿಗಳಿಗೆ ಗೌರವವಿದೆ. ಅವರ ಅವಹೇಳನದ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಖರ್ಗೆಯವರ ಸಭೆಗಳಿಗೆ ತಡೆಯೊಡ್ಡಬೇಕು; ಅವರು ಈ ರೀತಿ ಮಾತನಾಡದಂತೆ ಆದೇಶಿಸಲು ಕೋರಿದ್ದೇವೆ ಎಂದರು.
ಹಿಂದೆ ರಾಹುಲ್ ಗಾಂಧಿಯವರು ಮೋದಿಯವರ ಜಾತಿ ಕುರಿತು ಮಾತನಾಡಿದ್ದನ್ನು ಉಲ್ಲೇಖಿಸಿದ ಅವರು, ಚುನಾವಣೆ ಬಂದಾಗ ಅಭಿವೃದ್ಧಿ ಕೆಲಸಗಳನ್ನು ಹೇಳುವುದು ಬಿಟ್ಟು ಅನವಶ್ಯಕ ಟೀಕೆ, ನಿಂದನೆ ಮಾಡುತ್ತಾರೆ ಎಂದು ಟೀಕಿಸಿದರು. ಕಾಂಗ್ರೆಸ್ಸಿಗೆ ಅಭಿವೃದ್ಧಿಯ ಅಜೆಂಡ ಇಲ್ಲ. ವಿಶ್ವದಲ್ಲಿ ಅತ್ಯಂತ ಒಳ್ಳೆಯ ಪ್ರಧಾನಿ ಎಂಬ ಖ್ಯಾತಿ ಪಡೆದ ಮೋದಿಜಿ ಅವರನ್ನು ಅವಹೇಳನ ಮಾಡಿದ್ದನ್ನು ಖಂಡಿಸುವುದಾಗಿ ಹೇಳಿದರು.