ಬೆಂಗಳೂರು: ಕಾಂಗ್ರೆಸ್ ಸಂಸದ ಧೀರಜ್ ಸಾಹು ಮನೆಯಲ್ಲಿ 354 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿರುವ ಪ್ರಕರಣ ರಾಷ್ಟ್ರ ರಾಜಕಾರಣದಲ್ಲಿ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈ ಭಾರೀ ಹಣ ಪತ್ತೆ ಪ್ರಕರಣವನ್ನು ಮುಂದಿಟ್ಟು ಕಾಂಗ್ರೆಸ್ ವಿರುದ್ದ ಬಿಜೆಪಿ ನಾಯಕರು ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಇದಕ್ಕೆ ಎದಿರೇಟು ನೀಡಿರುವ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಕುಟುಂಬದ ವಿರುದ್ದದ ಭ್ರಷ್ಟಾಚಾರ ಆರೋಪವನ್ನು ಮುನ್ನಲೆಗೆ ತಂದಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಪಕ್ಷ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ 354 ಕೋಟಿಗೂ ಹೆಚ್ಚು ಹಣ ಸಿಕ್ಕಿದ್ದು, ಭ್ರಷ್ಟಾಚಾರ ಯಾರೆ ಮಾಡಿದರೂ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ತಪ್ಪು ಯಾರೇ ಮಾಡಿದರೂ ತಪ್ಪೇ ಎಂದರು.
2021ರ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ. 566 ಕೋಟಿ ವೆಚ್ಚದಲ್ಲಿ ಬಿಡಿಎ ಮನೆಗಳ ನಿರ್ಮಾಣಕ್ಕೆ ಕ್ಲಿಯರೆನ್ಸ್ ಕೊಡುವುದಕ್ಕೆ ಎಚ್ಡಿಎಫ್ಸಿ ಬ್ಯಾಂಕಿನಿಂದ ಆರ್ಟಿಜಿಎಸ್ ಮೂಲಕ ಯಡಿಯೂರಪ್ಪ ಅವರ ಕುಟುಂಬದವರ ಖಾತೆಗಳಿಗೆ ರಾಮಲಿಂಗಂ ಎಂಬ ಕಂಪನಿ ಹೆಸರಿನಲ್ಲಿ ಹಣ ವರ್ಗಾವಣೆ ಆಗಿತ್ತು ಎಂದು ಬೊಟ್ಟು ಮಾಡಿದರು.
ಆ ಹಣವನ್ನ ಕೋಲ್ಕತ್ತಾ ಮೂಲದ 7 ಶೆಲ್ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಆ ಶೆಲ್ ಕಂಪನಿಗಳು ಕಾರ್ಪೊರೇಷನ್ ಬ್ಯಾಂಕ್ ಮೂಲಕ ಯಡಿಯೂರಪ್ಪ ನವರ ಕುಟುಂಬಕ್ಕೆ ಸೇರಿದ 2 ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ್ದವು. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಎ1 , ಅವರ ಪುತ್ರ ಎ2, ಅಳಿಯ ಶಶಿದರ್ ಮರಡಿ ಎ3, ಮೊಮ್ಮಗ ಸಂಜಯ್ ಶ್ರೀ ಎ4, ದುಡ್ಡು ಕೊಟ್ಟ ಚಂದ್ರಕಾಂತ ರಾಮಲಿಂಗಂ ಎ5 ಹೀಗೆ ಮುಂತಾದವರ ಮೇಲೆ ಪ್ರಕರಣ ದಾಖಲಾಗಿತ್ತು ಎಂದರು.
ನರೇಂದ್ರ ಮೋದಿ ಅವರೆ ನೀವು ಭ್ರಷ್ಟರಲ್ಲ ಎಂದರೆ ಯಾಕೆ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೆ ನಿಮಗೆ ದಮ್ಮು, ತಾಕತ್ತು ಇದ್ದರೆ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕ್ರಮ ಜರುಗಿಸಿ ಎಂದು ಸವಾಲು ಹಾಕಿರುವ ಉಗ್ರಪ್ಪ, ವಿದೇಶದಲ್ಲಿ ಇರುವ ಕಪ್ಪು ಹಣ ವಾಪಸ್ ತರುತ್ತೇವೆ. ಕೋಟಾ ನೋಟುಗಳನ್ನು ನಿಲ್ಲಿಸುತ್ತೇವೆ. ಪ್ರತಿ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ನೀವು ಕೊಟ್ಟ ಆಶ್ವಾಸನೆ ಎಲ್ಲಿ ಎಂದು ಪ್ರಶ್ನಿಸಿದರು.
ದೇಶದ ಎಲ್ಲಾ ಭ್ರಷ್ಟರ ವಿರುದ್ಧ ತನಿಖೆ ಆಗಬೇಕು. ಕರ್ನಾಟಕ, ತೆಲಂಗಾಣ, ಒಡಿಸ್ಸಾ , ಪಶ್ಚಿಮ ಬಂಗಾಳ ಲದ ಕಾಂಗ್ರೆಸ್ ಮುಖಂಡರನ್ನ ಮಾತ್ರ ಗುರಿ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಲ್ಲಿ ಯಾರು ಭ್ರಷ್ಟರೇ ಇಲ್ಲವೇ ಎಂದರು.