ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಮರೆತಿದೆ ಎಂಬ ಆರೋಪ ಕೇಳಿಬಂದಿದೆ. ಕೋವಿಡ್ ಸಂದರ್ಭದಲ್ಲೂ ಪ್ರಾಣಪಣವಾಗಿಟ್ಟು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಲವು ತಿಂಗಳಿನಿಂದ ಗೌರವಧನ ಸಿಕ್ಕಿಲ್ಲ. ಸುರಕ್ಷಾ ಕ್ರಮಗಳ ಬಗ್ಗೆಯೂ ಸರ್ಕಾರ ಕ್ರಮವಹಿಸಲ್ಲವಂತೆ.
ಇಂತಹಾ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ‘ನಮೋ ಸಮಾಜ್’ ಸಂಸ್ಥೆ ಆಶಾ ಕಾರ್ಯಕರ್ತೆಯರ ನೆರವಿಗೆ ಧಾವಿಸಿದೆ. ನಮೋ ಸಮಾಜ್ ದಕ್ಷಿಣ ಭಾರತ ಪ್ರಮುಖ್ ಜಿ.ಆರ್.ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಲ್ತ್ ಕಿಟ್ಗಳನ್ನು ವಿತರಿಸಲಾಗುತ್ತಿದೆ.
ಕಳೆದೊಂದು ವಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಆಶಾ ಕಾರ್ಯಕರ್ತೆಯರಿಗೆ ಆಕ್ಸಿಮೀಟರ್, ಸ್ಯಾನಿಟೈಸರ್, ಮಾಸ್ಕ್ ಪ್ಯಾಕೆಟ್, ವಿಟಾಮಿನ್ ಟ್ಯಾಬ್ಲೆಟ್, ಆಯುರ್ವೇದಿಕ್ ಔಷಧಿಯನ್ನೊಳಗೊಂಡ ಕಿಟ್ ವಿತರಣೆ ಮಾಡಲಾಗಿದೆ. ಒಬ್ಬ ಆಶಾ ಕಾರ್ಯಕರ್ತೆಗೆ ಈ ಕಿಟ್ ನೀಡಿದರೆ ಅವರ ಮೂಲಕ ಇಡೀ ಊರಿನ ಜನರಿಗೆ ಅನುಕೂಲವಾಗುತ್ತದೆ ಎಂಬ ಪರಿಕಲ್ಪನೆಯಲ್ಲಿ ‘ನಮೋ ಸಮಾಜ್’ ಈ ಕೆಲಸವನ್ನು ಕೈಗೆತ್ತಿಕೊಂಡಿದೆ.
ನಟ, ಜೆಡಿಎಸ್ ಯುವನಾಯಕ ನಿಖಿಲ್ ಸಹಾಯಹಸ್ತ:
ಇನ್ನೊಂದೆಡೆ, ಕೋವಿಡ್ ವಾರಿಯರ್ ನೆರವಿಗೆ ದಾವಿಸಿದ ನಿಖಿಲ್ ಕುಮಾರಸ್ವಾಮಿ ಕೂಡಾ ಎಲ್ಲರ ಗಮನಸೆಳೆದಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಅವರು, ಮಹಾಮಾರಿ ಕೊರೋನಾ ವಿರುದ್ಧ ಹಗಲು ರಾತ್ರಿ ಶ್ರಮಪಟ್ಟ 430 ಆಶಾ ಕಾರ್ಯಕರ್ತೆಯರಿಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಪ್ ನರ್ಸ್’ಗಳಿಗೆ ಸಹಾಯ ಹಸ್ತ ಚಾಚಿದ ನಿಖಿಲ್ ಕುಮಾರಸ್ವಾಮಿ, ಗೌರವಧನ ಮತ್ತು ನೆಬ್ಯೂಲೈಸೇಷನ್ ಮಿಷಿನ್ ವಿತರಣೆ ಮಾಡಿದರು.
ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಅವರಣದಲ್ಲಿ ಹಮ್ಮಿಕೊಂಡಿರುವ ಸರಳ ಕಾರ್ಯಕ್ರಮದಲ್ಲಿ ಅವರು ಈ ಕಿಟ್ಗಳನ್ನು ವಿತರಿಸಿದರು.