ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಹಿಂಬಾಕಿ ಗೌರವ ಧನವನ್ನು ವಾರದೊಳಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಆಶಾಗಳಿಗೆ ಗೌರವಧನ ಪರಿಪೂರ್ಣವಾಗಿ ಸಂದಾಯವಾಗಿಲ್ಲ, ಬಾಕಿಯಿರುವ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇಂದು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಿಂದ ಗಲಿಬಿಲಿಗೊಂಡ ಅಧಿಕಾರಿಗಳು ಆಶಾ ಕಾರ್ಯಕರ್ತೆಯರ ಬಳಿ ಧಾವಿಸಿ ಅಹವಾಲು ಆಲಿಸಿದರು. ಹಿಂಬಾಕಿ ಗೌರವಧನವನ್ನು ವಾರದೊಳಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಕಳೆದ ಮೂರು ತಿಂಗಳ ಹಿಂಬಾಕಿ ಗೌರವಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಕೇಂದ್ರ ಕಾರ್ಮಿಕ ಸಂಘಟನೆಯಾದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜನೆ ಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಈ ಹೋರಾಟ ನಡೆಯಿತು.
ಪ್ರತಿಭಟನಾಕಾರರನ್ನುದೇಶಿಸಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ಸಿ.ರಮಾ, ಆಶಾ ಕಾರ್ಯಕರ್ತೆಯರು ತಮ್ಮ ಮೂಲ ಕೆಲಸಗಳಾದ ಸುಗಮ ಹೆರಿಗೆ, ಮಗುವಿನ ಜನನ, ತಾಯಿ-ಶಿಶು ಆರೈಕೆ, ಗ್ರಾಮ ನೈರ್ಮಲ್ಯ ಸೇರಿದಂತೆ ಪ್ರಮುಖ ಕಾರ್ಯಗಳಲ್ಲಿ ತೊಡಗಿದ್ದಾರೆ. ಮುಖ್ಯವಾಗಿ ಕೊರೋನಾದಂತಹ ಮಹಾಮಾರಿಯನ್ನು ಹೋಗಲಾಡಿಸಲು ತಮ್ಮ ಜೀವದ ಹಂಗನ್ನು ತೊರೆದು ಜನಗಳ ಸೇವೆ ಮಾಡಿದ್ದಾರೆ, ಹಾಗೂ ಜೀವಗಳನ್ನುಳಿಸಿದ್ದಾರೆ. ಆದರೆ ಬಡ ಹೆಣ್ಣು ಮಕ್ಕಳಾದ ಇವರುಗಳನ್ನು ಪದೇ ಪದೇ ಬೀದಿಗಿಳಿಸುತ್ತಿರುವ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಕಾಳಜಿ ತೋರದೇ ಇವರ ಸೇವೆಗಳನ್ನು ಚೆನ್ನಾಗಿ ಬಳಸಿಕೊಂಡು ಕಷ್ಟ ಪಟ್ಟು ಹೆಣಗುವ ಆಶಾಗಳಿಗೆ ಗೌರವಧನ ನೀಡದೇ ನಡುಬೀದಿಯಲ್ಲಿ ಬಿಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಆಶಾ ಕಾರ್ಯಕರ್ತೆಯರಿಗೆ ನಿಗದಿ ಪಡಿಸಿರುವ ಇಲಾಖೆಯ ಮುಖ್ಯ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರಾವುದೇ ಕಾರ್ಯಗಳಿಗೆ ಇವರುಗಳನ್ನು ತೊಡಗಿಸಬಾರದೆಂದು ಆದೇಶವಿದ್ದರೂ, ಹಲವಾರು ಕಡೆ ಒತ್ತಡ ಹೇರಿ ಆಶಾ ಕಾರ್ಯಕರ್ತೆಯರಿಗೆ ಎನ್ಸಿಡಿ ಸರ್ವೆ, ಈ ಸಂಜೀವಿನಿಯಂತಹ ಸರ್ವೆಗಳನ್ನು ಮಾಡಿಸುತ್ತಿದ್ದಾರೆ ಎಂದವರು ಗಮನಸೆಳೆದರು.
ಬಹುತೇಕ ಆಶಾಗಳು ಕಳೆದ ಮೂರು ತಿಂಗಳಿಂದ ಸಂಬಳ ಬಾರದಿರುವ ಹಿನ್ನೆಲೆಯಲ್ಲಿ ಸಾಲಗಾರರಾಗಿದ್ದಾರೆ. ಆರೋಗ್ಯ ವ್ಯತ್ಯಾಸದಿಂದ ಆಸ್ಪತ್ರೆಗೆ ದಾಖಲಾಗಲು ಹಣವಿಲ್ಲದೇ ಮನೆಗಳಲ್ಲೇ ಉಳಿದಿದ್ದಾರೆ. ಬೆಲೆ ಏರಿಕೆಯ ಭಾರದೊಂದಿಗೆ ಇಲಾಖೆಯ ಬೇಜವಾಬ್ದಾರಿತನದಿಂದ ಇವರುಗಳು ಸಂಕಷ್ಟಕ್ಕೊಳಗಾಗಿದ್ದಾರೆ, ಆದ್ದರಿಂದ ಹಿಂಬಾಕಿ ಗೌರವಧನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಅಧಿಕಾರಿಗಳು ದೌಡು..
ಆರೋಗ್ಯ ಇಲಾಖೆಯ ಪ್ರಮುಖರು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆರ್ಸಿಹೆಚ್ ಅಧಿಕಾರಿಗಳು, ಬಿಬಿಎಂಪಿಯ ಸಿಪಿಎಂಒ ಆದ ಸಂಘಮಿತ್ರ ಅವರು ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿ ಆಶಾ ಕಾರ್ಯಕರ್ತೆಯರ ಅಹವಾಲು ಆಲಿಸಿದರು. ಹೋರಾಟಗಾರರಿಂದ ಮನವಿ ಪತ್ರ ಸ್ವೀಕರಿಸಿದ ಅವರು, ಒಂದು ವಾರದೊಳಗೆ ಹಿಂಬಾಕಿ ಗೌರವಧನ್ನು ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದರು. ಹಾಗೂ ಉಳಿದ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲೇ ಒಂದು ಕುಂದು ಕೊರತೆಗಳ ಸಭೆಯನ್ನು ಆಯೋಜಿಸುವುದಾಗಿ ಹೇಳಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಎಐಯುಟಿಯುಸಿಯ ಮುಖಂಡರಾದ ಜಿ.ಹೆಚ್.ಹನುಮೇಶ್, ಶಣ್ಮುಗಂ, ಶ್ರೀಕಾಂತ್, ಬಿಬಿಎಂಪಿ ಆಶಾ ಮುಖಂಡರಾದ ಫರ್ಹಾನಾ, ನಾಗಲಕ್ಷಿ್ಮಿ ಮೊದಲಾದ ಪ್ರಮುಖರು ಭಾಗಿಯಾಗಿ ಸರ್ಕಾರದ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ಹೊರಹಾಕಿದರು.