ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆಗೈದ ನಟ ದರ್ಶನ್ ಗ್ಯಾಂಗ್ನ ಕೃತ್ಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸಿದೆ. ಕೃತ್ಯ ನಡೆಸಿದ ಅಪರಾಧಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಹಾಸಭಾ ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ನೀಡಿರುವ ಅವರು ರೇಣುಕಸ್ವಾಮಿ ಹತ್ಯೆಗೈದವರಿಗೆ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಲು ಮಹಾಸಭೆಯು ಒತ್ತಾಯಿಸುತ್ತದೆ ಎಂದಿದ್ದಾರೆ.
ಚಿತ್ರದುರ್ಗದ ರೇಣುಕಸ್ವಾಮಿಯವರ ಹತ್ಯೆಯನ್ನು ಅಖಿಲ ಭಾರತ ವೀರಶೈವ ಮಹಾಸಭೆಯು ಉಗ್ರವಾಗಿ ಖಂಡಿಸುತ್ತದೆ. ಈ ಕೃತ್ಯವೆಸಗಿರುವವರಿಗೂ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಎಲ್ಲ ವ್ಯಕ್ತಿಗಳಿಗೂ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಮಹಾಸಭೆಯು ಸರ್ಕಾರವನ್ನು ಒತ್ತಾಯಿಸುತ್ತದೆ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೇ, ಆರೋಪಿ ಸ್ಥಾನದಲ್ಲಿರುವವರನ್ನು ರಕ್ಷಿಸದೇ, ಸರ್ಕಾರವು ಶ್ರೀಸಾಮಾನ್ಯನ ಜೊತೆಗೆ ನಿಲ್ಲುತ್ತದೆ ಎಂಬುದನ್ನು ಈ ಘಟನೆಯಲ್ಲಿ ತೋರಿಸಬೇಕಾಗಿದೆ ಎಂದು ರೇಣುಕಾ ಪ್ರಸನ್ನ ಅವರು ಪ್ರತಿಪಾದಿಸಿದ್ದಾರೆ.
ಸರ್ಕಾರವು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲು ಮಹಾಸಭೆಯು ತೀರ್ಮಾನಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅವರು, ಘಟನೆಯಿಂದ ಸರ್ಕಾರ ಪ್ರಭಾವಿ ವ್ಯಕ್ತಿಗಳ ಪರವಾಗಿ ನಿಲ್ಲದೇ ಮೃತನ ಕುಟುಂಬದ ಜೊತೆ ನಿಲ್ಲುವುದು ಆದ್ಯ ಕರ್ತವ್ಯವಾಗಿದೆ. ಆ ಕುಟುಂಬಕ್ಕೆ ಅಗತ್ಯ ನೆರವನ್ನು ನೀಡುವಂತೆ ಸರ್ಕಾರವನ್ನು ಮಹಾಸಭೆಯು ಒತ್ತಾಯಿಸುತ್ತದೆ ಎಂದು ತಿಳಸಿದ್ದಾರೆ.
ಮಹಾಸಭೆಯು ಮೃತ ರೇಣುಕಸ್ವಾಮಿಯವರ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದು, ಅವರ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಲು ಸದಾ ಸಿದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.