ರಾಷ್ಟ್ರ ರಾಜಧಾನಿ ದೆಹಲಿಯ ಮರ್ಕಝ್ ನಿಜಾಮುದ್ದೀನ್’ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ – 19 ಸೋಂಕು ದೃಢಪಟ್ಟಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಭಾಗಿಯಾಗಿರುವ ಆತಂಕದ ವಿಚಾರವೊಂದು ಬೆಳಕಿಗೆ ಬಂದಿದೆ.
ನಗರದ ಹೊರವಲಯದ ತೊಕ್ಕೊಟ್ಟು ಸಮೀಪದ ವ್ಯಕ್ತಿಯೊಬ್ಬರು ದೆಹಲಿಯಲ್ಲಿ ನಡೆದೆ ಮರ್ಕಝ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಆ ವ್ಯಕ್ತಿ ಮಂಗಳೂರಿಗೆ ಮರಳಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ವ್ಯಕ್ತಿ ಮಂಗಳೂರು ಹಾಗೂ ನಗರದ ಅಸುಪಾಸಿನಲ್ಲಿ ತಿರುಗಾಟವನ್ನೂ ನಡೆಸಿದ್ದು, ಮನೆ ಮನೆಗೆ ದಿನಸಿ ಸಾಮಾಗ್ರಿಗಳನ್ನೂ ಪೂರೈಸುವ ಕಾರ್ಯದಲ್ಲಿ ನಿರತನಾಗಿದ್ದ ಎಂದು ತಿಳಿದುಬಂದಿದೆ.
ದೆಹಲಿಯ ನಿಜಾಮುದ್ದೀನ್ ಎಂಬಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ವಿದೇಶ ಸೇರಿದಂತೆ ದೇಶದ ಹಲವಡೆಯಿಂದ ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಭಾಗವಹಿಸಿದ ನೂರಕ್ಕೂ ಮಿಕ್ಕಿದ ಜನರಲ್ಲಿ ಕೊರೊನಾ ರೋಗ ಲಕ್ಷಣಗಳು ಪತ್ತೆಯಾಗಿದ್ದು, ತಮಿಳುನಾಡು, ತೆಲಂಗಾಲ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಸಮಾವೇಶದಲ್ಲಿ ಭಾಗವಹಿಸಿದ ಮಂದಿ ಕೊರೊನಾ ಪೀಡಿತರಾಗಿ ಮೃತಪಟ್ಟ ಘಟನೆಯೂ ನಡೆದಿದೆ.
ಸದ್ಯ ದೆಹಲಿಯಿಂದ ಬಂದ ತೊಕ್ಕೊಟ್ಟಿನ ವ್ಯಕ್ತಿ ಮನೆಯಲ್ಲೇ ಇರುವುದನ್ನು ಪತ್ತೆ ಹಚ್ಚಿರುವ ಪೋಲೀಸರು ಹಾಗೂ ಆರೋಗ್ಯಾಧಿಕಾರಿಗಳು ವ್ಯಕ್ತಿಯನ್ನು ಮನೆಯಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಇನ್ನೂ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದ್ದು, ಜಿಲ್ಲಾಡಳಿತ ಆ ವ್ಯಕ್ತಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದೆ.




















































