ನವದೆಹಲಿ: ಅರ್ಹ ನಾಗರಿಕರ ಹೆಸರುಗಳು ಮಾತ್ರ ಮತದಾರರ ಪಟ್ಟಿಯಲ್ಲಿ ಇರಲಿ ಹಾಗೂ ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ, ಭಾರತ ಚುನಾವಣಾ ಆಯೋಗ (ECI) ಒಡಿಶಾ, ಮಿಜೋರಾಂ, ಸಿಕ್ಕಿಂ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದ ಮಾಹಿತಿ ಸಂಗ್ರಹ ಹಂತವನ್ನು ಆರಂಭಿಸಿದೆ.
ಮೇ 14ರಂದು 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪರಿಷ್ಕರಣೆ ಪ್ರಕ್ರಿಯೆಗೆ ಆಯೋಗ ಆದೇಶ ನೀಡಿತ್ತು. ಅದರ ಭಾಗವಾಗಿ ಮೇ 30ರಿಂದ ನಾಲ್ಕು ರಾಜ್ಯಗಳಲ್ಲಿ ಮನೆಮನೆಗೆ ತೆರಳಿ ಮತದಾರರ ವಿವರ ಸಂಗ್ರಹ ಕಾರ್ಯ ಆರಂಭವಾಗಿದೆ.
ಚುನಾವಣಾ ಆಯೋಗದ ಪ್ರಕಾರ, ಜೂನ್ 28, 2026ರೊಳಗೆ ಮತದಾರ ನೋಂದಣಿ ಅಧಿಕಾರಿಗೆ (ERO) ಮಾಹಿತಿ ನಮೂನೆ ಸಲ್ಲಿಸಿದವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ. ಗಡುವಿನೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ನಂತರದ ಹಕ್ಕು-ಆಕ್ಷೇಪಣೆ ಅವಧಿಯಲ್ಲಿ ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಬಹುದು.
ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ನಮೂನೆಗಳನ್ನು ವಿತರಿಸುವುದು, ಸಂಗ್ರಹಿಸುವುದು ಮತ್ತು ಪರಿಶೀಲಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕರು ಆನ್ಲೈನ್ ಮೂಲಕವೂ ನಮೂನೆ ಸಲ್ಲಿಸಬಹುದಾಗಿದೆ. ಗರಿಷ್ಠ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಹಲವು ಬಾರಿ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಆಯೋಗ ತಿಳಿಸಿದೆ.
ಹೊಸ ಮತದಾರರ ನೋಂದಣಿಗೆ ಅನುಕೂಲವಾಗುವಂತೆ, BLOಗಳಿಗೆ ಖಾಲಿ ಫಾರ್ಮ್-6 ಅರ್ಜಿಗಳನ್ನು ಕೊಂಡೊಯ್ಯುವಂತೆ ಸೂಚಿಸಲಾಗಿದೆ. ಜೊತೆಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳಿಗೆ (BLA) ದಿನಕ್ಕೆ 50 ಅರ್ಜಿಗಳವರೆಗೆ ಸಂಗ್ರಹಿಸಿ BLOಗಳಿಗೆ ಸಲ್ಲಿಸಲು ಅನುಮತಿ ನೀಡಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸುಗಮವಾಗಿ ನಡೆಯಲು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಹೆಚ್ಚಿನ BLAಗಳನ್ನು ನೇಮಿಸಬೇಕೆಂದು ಚುನಾವಣಾ ಆಯೋಗ ಮನವಿ ಮಾಡಿದೆ.



























































