📝 ಜಯ ಪ್ರಕಾಶ್
ಲಂಡನ್: ಲಂಡನ್ನಲ್ಲಿ ಕನ್ನಡ ಪರವಾಗಿ ಕಮಾಲ್ ಪ್ರದರ್ಶಿಸುತ್ತಿರುವ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ -NECಗೆ ಆಯ್ಕೆಯಾಗಿದ್ದಾರೆ.

ಲಂಡನ್ ಬರೋ ಆಫ್ ಲ್ಯಾಂಬೆತ್ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಪಕ್ಷದ ಪರಮೋಚ್ಚ ನಿರ್ಣಾಯಕ ಸಮಿತಿಯಾಗಿರುವ ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗುವ ಮೂಲಕ ಲಂಡನ್ನಲ್ಲಿರುವ ಕನ್ನಡಿಗರ ನಡುವೆ ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ.
ಲೇಬರ್ ಪಾರ್ಟಿ ಪ್ರಧಾನ ಕಾರ್ಯದರ್ಶಿಯಾದ ಡೇವಿಡ್ ಇವಾನ್ಸ್ ಅವರು ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು NEC ಸದಸ್ಯರ ಪಟ್ಟಿಯಲ್ಲಿ ಡಾ.ನೀರಜ್ ಪಾಟೀಲ್ ಅವರ ಹೆಸರಿನ ಉಲ್ಲೇಖವಿದೆ.
ಕನ್ನಡಿಗರಿಗೆ ಹೆಮ್ಮೆ;
ಲಂಡನ್ ಪಾರ್ಲಿಮೆಂಟ್ ಸಮೀಪ ಜಗಜ್ಯೋತಿ ಬಸವಣ್ಣ ಪ್ರತಿಮೆ ಸ್ಥಾಪಿಸುವ ಮೂಲಕ ಎಲ್ಲರ ಗಮನಸೆಳೆದಿರುವ ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಮೂಲತಃ ಕನ್ನಡಿಗರು. ಇವರು ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವ ಬೆಳವಣಿಗೆ ಬಗ್ಗೆ ಲಂಡನ್ನಲ್ಲಿರುವ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕನ್ನಡಿಗನ ಆಯ್ಕೆಯು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಕನ್ನಡ ಸಂಘಗಳ ಪ್ರಮುಖರು ಸಂತಸ ಹಂಚಿಕೊಂಡಿದ್ದಾರೆ.
ಏನಿದು NEC?;
NEC ಎಂಬುದು ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ. ಪಕ್ಷದ ಪರಮೋಚ್ಚ ನಿರ್ಣಾಯಕ ಸಮಿತಿ ಇದಾಗಿದೆ. 39 ಸದಸ್ಯರ ನೀತಿ ನಿರೂಪಣಾ ಸಂಸ್ಥೆಯ ಮೊದಲ ಸಭೆ ಮಂಗಳವಾರ ನಡೆಯಲಿದ್ದು ನೂತನ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಉಪ ಪ್ರಧಾನಿ ಏಂಜೆಲಾ ರೇನರ್ ಕೂಡ ಭಾಗವಹಿಸಲಿದ್ದಾರೆ. ಈ ಸ್ಥಾನದಲ್ಲಿದ್ದುಕೊಂಡು ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಡಾ.ನೀರಜ್ ಪಾಟೀಲ್ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನೇಕ ಸಂಸದರು ಮತ್ತು ಇತರ ಪ್ರಮುಖ ಲೇಬರ್ ಪಕ್ಷದ ಸದಸ್ಯರನ್ನು NEC ಹೊಂದಿದ್ದು ಮತದಾರರ ಬೆಂಬಲ ಕಾಯ್ದಿಟ್ಟುಕೊಳ್ಳುವ, ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವ ಜವಾಬ್ಧಾರಿ ಇದ್ದು, ಕಾರ್ಯತಂತ್ರಗಳ ರೂಪಿಸುವುದು ಸಮಿತಿಯ ಕಾರ್ಯವಾಗಿದೆ ಎಂದವರು ವಿವರಿಸಿದ್ದಾರೆ.
ಈ ಸ್ಥಾನ ಆಲಂಕರಿಸುವ ಬಗ್ಗೆ ನಿರೀಕ್ಷಿಸಿರಲಿಲ್ಲ ಎಂದಿರುವ ನೀರಜ್ ಪಾಟೀಲ್, ಬ್ರಿಟನ್ನಲ್ಲಿರುವ ಭಾರತೀಯ ಮೂಲದ ಸುಮಾರು 17 ಲಕ್ಷ ಮತದಾರರ ಆಶೀರ್ವಾದ ಸಿಕ್ಕಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಯಾರಿವರು ಡಾ.ನೀರಜ್ ಪಟೀಲ್?
ಲಂಡನ್ನಲ್ಲಿರುವ ಕನ್ನಡಿಗ ಡಾ.ನೀರಜ್ ಪಟೀಲ್ ಅವರು ಮೂಲತಃ ವೈದ್ಯರು. ಎನ್ಎಚ್ಎಸ್ನಲ್ಲಿ 28 ವರ್ಷಗಳ ಸೇವೆಯೊಂದಿಗೆ ಅಪಘಾತ, ತುರ್ತು ವೈದ್ಯಕೀಯ ಸಲಹೆಗಾರರಾದ ಡಾ. ನೀರಜ್ ಪಾಟೀಲ್, ಸೇಂಟ್ ಥಾಮಸ್ ಆಸ್ಪತ್ರೆ ಮತ್ತು ಕಿಂಗ್ಸ್ ಕಾಲೇಜು ಆಸ್ಪತ್ರೆಯ ಫೌಂಡೇಶನ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಲಂಡನ್ ರಾಜಕಾರಣದಲ್ಲೂ ತಮ್ಮದೇ ಆದ ಸಂಘಟನಾತ್ಮಕ ಶಕ್ತಿ ಹೊಂದಿದ್ದಾರೆ.
ಕಳೆದೆರಡು ದಶಕಗಳಿಂದ ಬ್ರಿಟಿಷ್ ಲೇಬರ್ ಪಾರ್ಟಿಯ ಸದಸ್ಯರಾಗಿರುವ ಇವರು ದಶಕಗಳ ಹಿಂದೆ, ಇಂಗ್ಲೆಂಡ್ನ ಲ್ಯಾಂಬೆತ್ ನಗರದ ಮೇಯರ್ ಆಗಿದ್ದರು. ಸುಮಾರು ಎಂಟು ವರ್ಷಗಳ ಕಾಲ ಲ್ಯಾಂಬೆತ್ ಕೌನ್ಸಿಲ್ನಲ್ಲಿ ಸೇವೆ ಸಲ್ಲಿಸಿದ ಖ್ಯಾತಿಯೂ ನೀರಜ್ ಪಾಟೀಲ್ ಅವರದ್ದು. ಮೇಯರ್ ಆಗಿದ್ದಾಗ ಅಲ್ಲಿನ ಥೇಮ್ಸ್ ನದಿ ದಡದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಮುಂದಾಳತ್ವ ವಹಿಸಿದ್ದರು. ಈ ಪ್ರತಿಮೆಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು.


























































