ಶಿವಮೊಗ್ಗ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಇಲಾಖೆಯಲ್ಲಿ ಆಸಕ್ತಿಯೂ ಇಲ್ಲ, ಹಿಡಿತವೂ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆಯನ್ನು ಸಿಎಂ, ಡಿಸಿಎಂ ಮತ್ತು ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸರ್ಕಾರಕ್ಕೆ ಮಾನ ಮರ್ಯಾದೆ ಉಳಿಯಬೇಕೆಂದರೆ ಅವರಾಗಿಯೇ ವಾಲ್ಮಿಕಿ ನಿಗಮದ ಅಧಿಕಾರಿಯ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಉತ್ತಮ ಎಂದರು. ಕಾಂಗ್ರೆಸ್ನ ಕೆ.ಜೆ.ಜಾರ್ಜ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿತ್ತು. ತಪ್ಪಿತಸ್ಥರಲ್ಲವೆಂದರೆ ಕ್ಲೀನ್ ಚಿಟ್ ಸಿಗುತ್ತದೆ. ಇದು ಬಡವರ ಹಣವಾಗಿದ್ದು, ವಾಲ್ಮೀಕಿ ಸಮುದಾಯವರಿಗೆ ಸಾಲ ನೀಡಲು ಈ ಹಣ ಬಳಕೆಯಾಗುತ್ತಿತ್ತು. ಈಗ ಸರ್ಕಾರ ಎಲ್ಲ ಬಗೆಯ ಸಾಲಗಳನ್ನು ಸ್ಥಗಿತಗೊಳಿಸಿದೆ ಎಂಬ ಸುದ್ದಿ ಬಂದಿದೆ. ಪರಿಶಿಷ್ಟ ಪಂಗಡದವರಿಗೆ ಈಗ ಸಾಲವೇ ಇಲ್ಲದೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದು ಅಶೋಕ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಪಂಗಡದ ಜನರ ಬಗ್ಗೆ ಗೌರವವೇ ಇಲ್ಲ. ಗೌರವ ಇದ್ದರೆ ಸರಿಯಾದ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಕೆಆರ್ಐಡಿಎಲ್ ಗುತ್ತಿಗೆದಾರ ಪಿ.ಸಿ.ಗೌಡರ್ ಅವರ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ಸಚಿವ ಪ್ರಿಯಾಂಕ್ ಖರ್ಗೆ ಈಗ ಉತ್ತರ ಹೇಳಬೇಕು. ಕೂಡಲೇ ಖರ್ಗೆ ಅವರನ್ನು ಸಂಪುಟದಿಂದ ವಜಾಗೊಳಿಸಿ ತನಿಖೆಗೆ ಎಸ್ಐಟಿ ರಚಿಸಬೇಕು. ಗುತ್ತಿಗೆದಾರರ ಬಾಕಿ ಪಾವತಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕೆ.ಎಸ್.ಈಶ್ವರಪ್ಪನವರ ಪ್ರಕರಣದಲ್ಲಿ ರಸ್ತೆ ರಸ್ತೆಯಲ್ಲಿ ಕಾಂಗ್ರೆಸ್ಸಿಗರು ಬಾಯಿ ಬಡಿದುಕೊಂಡಿದ್ದರು. ಈಗ ಕಮಿಶನ್ಗಾಗಿ ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಸಚಿವರು ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ಬಿಡುವುದಿಲ್ಲ. ಕುಟುಂಬದವರಿಗೆ ನ್ಯಾಯ ಕೊಡಿಸಲು ಎಲ್ಲ ಬಗೆಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು.