ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಚರ್ಚೆ ಮಾಡಬೇಕಾದ ವಿಚಾರಗಳನ್ನು ಬಿಟ್ಟು ವಿಷಯಾಂತರ ಮಾಡಿ ಮಾತನಾಡುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ಬಗ್ಗೆ ಮಾತನಾಡುವ ಬದಲು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಯಾರೋ ಒಬ್ಬರು ಚೋಟಾ ಸಹಿ ಹಾಕಿದ ಕಾರಣಕ್ಕೆ ಯಡಿಯೂರಪ್ಪ ಅವರ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಈ ಚೋಟಾ ಸಹಿ ಹಾಕಿದವರು ಯಾರು? ಮಧು ಬಂಗಾರಪ್ಪ ಅವರ ಬಗ್ಗೆ ಮಾತನಾಡಿದ್ದೀರಿ ಎಂದು ನಿಮ್ಮ ಕ್ಷಮೆಯನ್ನೂ ನಾವು ಬಯಸುವುದಿಲ್ಲ. ನಿಮ್ಮ ಕ್ಷಮೆ ನಮಗೆ ಬೇಡ. ಬದಲಾಗಿ ಪಕ್ಷ ಕಟ್ಟಿದ ಈಶ್ವರಪ್ಪ, ಯತ್ನಾಳ್ ಅವರ ಬಳಿ ಕೇಳಿ ಎಂದರು.
LIVE : ಶಾಸಕರಾದ ಪ್ರದೀಪ್ ಈಶ್ವರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ. ರಾಮಚಂದ್ರಪ್ಪ ಹಾಗೂ ಸತ್ಯ ನಾರಾಯಾಣ್ ಅವರ ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/6mvWhNFS58
— Karnataka Congress (@INCKarnataka) May 29, 2024
ಬರ ಪರಿಹಾರದ ಬಗ್ಗೆ ಮಾತನಾಡಿಲ್ಲ. ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಕೇಂದ್ರದ ಬಳಿ ಮಾತನಾಡಿಲ್ಲ. 26 ಜನ ಸಂಸದರಿದ್ದರೂ ಒಮ್ಮೆಯೂ ದನಿ ಎತ್ತಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷದ 20 ಕ್ಕೂ ಹೆಚ್ಚು ಸಂಸದರು ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ತರುತ್ತಾರೆ. ನೀವು ಅನವಶ್ಯಕ ಮಾತುಗಳನ್ನು ಬಿಟ್ಟು ಹಿಂದುಳಿದ ವರ್ಗಗಳ ನಾಯಕರು ಬೆಳೆಯಲು ಅವಕಾಶ ಮಾಡಿಕೊಡಿ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗದ ಇತಿಹಾಸದಲ್ಲಿ ಬಂಗಾರಪ್ಪ ಅವರು ಹಾಗೂ ಯಡಿಯೂರಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ. ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕದ ಮೂಲಕ ಹಳ್ಳಿ ಯುವಕರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಅಪ್ಪನ ಹಾದಿಯಂತೆ ಮಧು ಬಂಗಾರಪ್ಪ ಅವರು 12 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಕಟ್ಟುನಿಟ್ಟಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿವೆ. ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಯಡಿಯೂರಪ್ಪ, ಈಶ್ವರಪ್ಪ ಅವರು ಬಿಜೆಪಿಯನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಕಟ್ಟಿದ್ದಾರೆ. ಈಶ್ವರಪ್ಪ ಅವರನ್ನು ಕರ್ನಾಟಕದ ಅಡ್ವಾನಿ ಎಂದು ಕರೆಯಲಾಗುತ್ತಿತ್ತು. ಅಂತಹವರನ್ನು ವಿಜಯೇಂದ್ರ ಅವರು ಅದ್ವಾನ ಮಾಡಿದ್ದಾರೆ. ಈಶ್ವರಪ್ಪ ಅವರು ಹಾಗೂ ಅವರ ಮಗನಿಗೆ ಟಿಕೆಟ್ ಏಕೆ ತಪ್ಪಿಸಿದ್ದೀರಿ ಉತ್ತರಿಸಿ. ನೀವು ಓದುವುದು ಕಡಿಮೆ ಮಾಡಿರಬೇಕು ಅಥವಾ ನಿಮಗೆ ಸಲಹೆ ನೀಡುತ್ತಿರುವವರು, ಸುತ್ತಮುತ್ತ ಇರುವವರು ಓದುವುದು ಕಡಿಮೆ ಮಾಡಿರಬೇಕು ಆದ ಕಾರಣಕ್ಕೆ ನೀವು ತಾಳ ತಪ್ಪಿದವರಂತೆ ಮಾತನಾಡುತ್ತಾ ಇದ್ದೀರಿ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಬಸನಗೌಡ ಪಾಟೀಲ ಯತ್ನಾಳ ಅವರು ವಿರೋಧ ಪಕ್ಷಗಳ ಮೇಲೆ ಕಿಡಿ ಕಾರಿದ್ದಕ್ಕಿಂತ ಹೆಚ್ಚು ವಿಜಯೇಂದ್ರ ಅವರ ಮೇಲೆ ಕಿಡಿ ಕಾರಿದ್ದಾರೆ. ಇದು ಯಾವ ಕಾರಣಕ್ಕೆ ಎಂದು ಉತ್ತರಿಸಬಹುದೇ? ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದ ಬಗ್ಗೆ ಒಮ್ಮೆಯೂ ದನಿ ಎತ್ತಿಲ್ಲ. ವಿರೋಧ ಪಕ್ಷದ ರಾಜ್ಯ ಅಧ್ಯಕ್ಷರಾಗಿ ತಲೆಯಲ್ಲಿ ವಿಷಯಗಳು ಇಲ್ಲದೇ ಇದ್ದಾಗ ಈ ರೀತಿಯ ಕ್ಷುಲ್ಲಕ ವಿಚಾರಗಳು ಮುನ್ನೆಲೆಗೆ ಬರುತ್ತವೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

























































