ನವದೆಹಲಿ: ಮೋದಿ ಸರ್ಕಾರದ ವಿರುದ್ದ ರೈತರ ಮತ್ತೊಂದು ಸುತ್ತಿನ ಮಹಾಸಮರಕ್ಕೆ ವೇದಿಕೆ ಸಜ್ಜಾಗಿದೆ. ರೈತರಿಗೆ ನೀಡಿದ ಭರವಸೆ ಹುಸಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಫೆಬ್ರುವರಿ 13ರಂದು ದೆಹಲಿ ಚಲೋ ಆಂದೋಲನ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯಿಂದ ಘೋಷಿಸಿದೆ.
ದೇಶದ ವಿವಿಧ ರಾಜ್ಯಗಳ ನೂರಾರು ರೈತ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ರಾಷ್ಟ್ರೀಯ ರೈತ ಮುಖಂಡರ ಸಭೆ ರಖಪ್ಚಂದ್ ಗುರುದ್ವಾರ ಸಭಾಂಗಣದಲ್ಲಿ ನಡೆಯಿತು, ಫೆಬ್ರವರಿ 13 ರಂದು ರೈತರ ದೆಹಲಿ ಚಲೋ ಆಂದೋಲನ ನಡೆಸಲು ತೀರ್ಮಾನಿಸಲಾಯಿತು.
ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು, 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10 ಸಾವಿರ ಪಿಂಚಣಿ ಯೋಜನೆ ಬರಬೇಕು. ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಈ ಆಂದೋಲನ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಕಿಸಾನ್ ಮೋರ್ಚಾದ ಪ್ರಮುಖ ಬೇಡಿಕೆಗಳು:
-
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು.
-
ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು
-
ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು
-
ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತ ಸರ್ಕಾರ ಹೊರಬರಬೇಕು
-
ದೇಶಾದ್ಯಂತ 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10 ಸಾವಿರ ಪಿಂಚಣಿ ಯೋಜನೆ ಬರಬೇಕು
ರೈತರ ಈ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರ ಕೈಗೊಳ್ಳದಿದ್ದರೆ ಫೆಬ್ರವರಿ 13ರಂದು ಎಲ್ಲ ರಾಜ್ಯಗಳಿಂದ ಲಕ್ಷಾಂತರ ರೈತರು ರ್ಯಾಲಿ ಮೂಲಕ ದೆಹಲಿ ಚಲೋ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ.
ಮುಖಂಡರಾದ ಪಂಜಾಬ್ನ ಜಗಜಿತ್ ಸಿಂಗ್ ದಲೈವಾಲ್, ಮಧ್ಯಪ್ರದೇಶದ ಶಿವಕುಮಾರ್ ಕಕ್ಕ, ಹರಿಯಾಣದ ಅಭಿಮನ್ಯುಕೊಹರ್, ಕರ್ನಾಟಕದ ಕುರುಬೂರ್ ಶಾಂತಕುಮಾರ್, ಬಿಹಾರದ ಅರುಣ್ ಸಿನ್ಹ, ಉತ್ತರ ಪ್ರದೇಶದ ಹರ್ಪಲ್ ಬಿಲಾರಿ, ಲಕ್ವೀನ್ದಂದರ್ ಸಿಂಗ್, ಜರ್ರನಲ್ ಸಿಂಗ್ , ಶಿರಸಾ ಸಿಂಗ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
























































