ದೊಡ್ಡಬಳ್ಳಾಪುರ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳಾ ಕೂಲಿ ಕಾರ್ಮಿಕರ 6 ತಿಂಗಳಿಂದ 3 ವರ್ಷದವರೆಗಿನ ಮಕ್ಕಳ ಪಾಲನೆ ಮಾಡುವ ಉದ್ದೇಶದಿಂದ ಕೂಸಿನಮನೆ ಯೋಜನೆಯನ್ನು ಜಾರಿ ಮಾಡಲಾಗಿದೆ. .
ತಾಲ್ಲೂಕಿನ ಕಂಟನಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲಾ ಆವರಣದಲ್ಲಿ ನೂತನ ಕೂಸಿನ ಮನೆ ಯೋಜನೆಗೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಭಾಗದಲ್ಲಿ ಮಹಿಳಾ ಕೂಲಿ ಕಾರ್ಮಿಕರಿಗೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ. ಮಕ್ಕಳ ಲಾಲನೆ ಪಾಲನೆಗೆ ಸಾಕಷ್ಟು ಸಮಯ ತಾಯಿ ಸಾಕಷ್ಟು ಸಮಯ ನೀಡಬೇಕಾಗುತ್ತದೆ. ಆದರೆ ಕೆಲಸ ಮಾಡದ ಹೊರತು ಜೀವನ ಸಾಗುವುದಿಲ್ಲ. ಇಂತಹ ಕಠಿಣ ಪರಿಸ್ಥಿತಿಯನ್ನು ಅರಿತ ಸರ್ಕಾರ ಮಕ್ಕಳನ್ನು ಆರೋಗ್ಯಭರಿತವಾಗಿ, ಒಳ್ಳೆಯ ವಾತಾವರಣದಲ್ಲಿ ನೋಡಿಕೊಳ್ಳಲು ನುರಿತ ಸಿಬ್ಬಂದಿ ನಿಯೋಜಿಸಿ ಕೂಸಿನ ಮನೆ ಜಾರಿ ಮಾಡಲಾಗಿದೆ ಎಂದರು. ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು ಮಾತನಾಡಿ ಗ್ರಾಮೀಣ ಮಹಿಳೆಯರು ಮಕ್ಕಳ ಪಾಲನೆ ಸಲುವಾಗಿ ದುಡಿಮೆಯಿಂದ ವಂಚಿತರಾಗಬಾರದು. ಮಹಿಳೆಯರು ದುಡಿಮೆಯನ್ನು ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ಕೂಸಿನ ಮನೆಗಳನ್ನು ಪ್ರಾರಂಭ ಮಾಡಿದೆ. ಕೂಸಿನ ಮನೆಗಳಲ್ಲಿ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿ ಆಟದ ಸಾಮಗ್ರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುವುದು ಎಂದರು.
ತಾ.ಪಂ ಇಓ ಎನ್.ಮುನಿರಾಜು, ಪಿಡಿಓ ನಂದಕುಮಾರ್, ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.