ಬೆಳಗಾವಿ: ಪ್ರಾದೇಶಿಕ ಅಸಮತೋಲನ ನಿವಾರಣೆಯತ್ತ ಚಿತ್ತ ಹರಿಸಿರುವ ಸರ್ಕಾರ ಇದೀಗ ಸಾರಿಗೆ ಸಂಸ್ಥೆ ವಿಚಾರದಲ್ಲೂ ಮಹತ್ವದ ಹೆಜ್ಜೆ ಇಟ್ಟಿದೆ.
ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಿರುವ ಸರ್ಕಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೇಮಕಾತಿ ಕ್ರಮವನ್ನೂ ಸುಸೂತ್ರವಾಗಿ ಪರಿಪೂರ್ಣಗೊಳಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ನಿರ್ದೇಶನದಂತೆ ನಿಗಮವು ತ್ವರಿತ ಕ್ರಮ ಕೈಗೊಂಡಿದ್ದು ಇದೀಗೆ ಸಾರಿಗೆ ಸಂಸ್ಥೆಯ ಮೃತ ಸಿಬ್ಬಂದಿಯ ಕುಟುಂಬ ವರ್ಗಕ್ಕೆ ಸಾಂತ್ವನದ ಜೊತೆ ‘ನೌಕರಿ ಭಾಗ್ಯ’ವೂ ಸಿಕ್ಕಂತಾಗಿದೆ. ಈ ಸಂಬಂಧ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮ ಕುತೂಹಲದ ಕೇಂದ್ರಬಿಂದುವಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ 49 ಮೃತಾವಲಂಬಿತರನ್ನು ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಈ ಪೈಕಿ ಕ.ರಾ.ಸಾ ಪೇದೆ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದ್ದು, ಗುರುವಾರ (13.12.2023) ಸಾರಿಗೆ ಮಂತ್ರಿ ರಾಮಲಿಂಗರೆಡ್ಡಿ ಅವರು ಸುವರ್ಣ ಸೌಧದಲ್ಲಿ ಸಾಂಕೇತಿಕವಾಗಿ 10 ಜನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಿದರು.
ಈ ಸಂದರ್ಭಲ್ಲಿ ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್.ಎಸ್, ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರಿಗೆ ಸಚಿವರಿಂದ ನೇಮಕಾತಿ ಪತ್ರ ಸ್ವೀಕರಿಸಿದ ಅಭ್ಯರ್ಥಿಗಳ ಪಾಳಯದಲ್ಲಿ ಸಂತಸ ಕಂಡು ಬಂತು. ತಮ್ಮವರನ್ನು ಅಗಲಿದ ದುಃಖದಲ್ಲಿದ್ದ ನಮಗೆ ಸಚಿವ ರಾಮಲಿಂಗರೆಡ್ಡಿ ಅವರಿಂದ ಸಂತ್ವನ ಸಿಕ್ಕಿದೆ. ಜೊತೆಗೆ ಜೀವನಾಧಾರಕ್ಕಾಗಿ ಕೆಲಸವೂ ಸಿಕ್ಕಿದಂತಾಗಿದೆ ಎಂದು ಫಲಾನುಭವಿಗಳು ಸಂತಸ ಹಂಚಿಕೊಂಡರು.