ಬೆಂಗಳೂರು: ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮುಗಿಸಲು ಷಡ್ಯಂತ್ರ ನಡೆದಿದೆಯೇ? ಈ ಕುರಿತು ಎದುರಾಳಿಗಳ ಹೇಳಿಕೆಗಳಿಗೆ ಹಾಗೂ ಮಾಧ್ಯಮಗಳಲ್ಲಿನ ವರದಿಗಳಿಗೆ ಮುತ್ಸದ್ದಿ ನಾಯಕ ಯಡಿಯೂರಪ್ಪ ಅವರು ತೀಕ್ಷ್ಣ ಉತ್ತರ ನೀಡಿದ್ದಾರೆ.
ಕೊಪ್ಪಳಕ್ಕೆ ತೆರಳುವ ಮುನ್ನ ಮಾಜಿ ಯಡಿಯೂರಪ್ಪ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ, ರಾಜ್ಯ ರಾಜಕಾರಣದಲ್ಲಿನ ಊಹಾಪೋಹಗಳ ಸುದ್ದಿಗಳಿಗೆ ತಮ್ನದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೊಪ್ಪಳಕ್ಕೆ ಬರ್ತಿದ್ದಾರೆ. ಅವರ ಕಾರ್ಯಕ್ರಮಕ್ಕೆ ಹೋಗ್ತಿದ್ದೇನೆ ಎನ್ನುತ್ತಾ ಎಲ್ಲಾ ಊಹಾಪೋಹಗಳಿಗೂ ಉತ್ತರ ನೀಡಿದರು..
‘ಬೇರೆ ಕಾರಣಕ್ಕೆ ನಾನು ಇವತ್ತು ಕಾರ್ಯಕ್ರಮಕ್ಕೆ ಹೋಗದೇ ಇರೋ ಸ್ಥಿತಿ ಇತ್ತು. ಹೋಗಲೇಬೇಕು ಅನ್ನೋ ಸ್ಥಿತಿ ಬಂತು. ಹೀಗಾಗಿ ಹೋಗ್ತಿದ್ದೇನೆ. ಸಿಎಂ ಕೂಡಾ ಕಾರ್ಯಕ್ರಮಕ್ಕೆ ಬರ್ತಿದ್ದಾರೆ. ಇಬ್ಬರು ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳು ಇಲ್ಲ. ಮಾಧ್ಯಮ ಸ್ನೇಹಿತರು ಯಾವುದನ್ನೂ ಸೃಷ್ಟಿ ಮಾಡೋಕೆ ಹೋಗಬೇಡಿ. ನಾವೆಲ್ಲ ಒಟ್ಟಾಗಿ ಇದ್ದೇವೆ ಒಂದಾಗಿ ಇದ್ದೇವೆ. ನಮ್ಮದು ಒಂದೇ ಅಜೆಂಡಾ’ ಎಂದು ಬಿಎಸ್ವೈ ಹೇಳಿದರು.
ಮುಂದೆ ಚುನಾವಣೆ ಇದೆ. ಪಕ್ಷವನ್ನು ಅಧಿಕಾರಕ್ಕೆ ತರೋದು, ಅದಕ್ಕೆ ಬೇಕಾದ ಎಲ್ಲಾ ಶ್ರಮ ಹಾಕ್ತೀನಿ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ ಎಂದವರು ತಿಳಿಸಿದರು. ಬಿಜೆಪಿ ಪರವಾಗಿ ರಾಜ್ಯದಲ್ಲಿ ವಾತಾವರಣ ಇದೆ. ಮೋದಿ, ಅಮಿತ್ ಶಾ, ನಡ್ಡಾ ನೇತೃತ್ವದಲ್ಲಿ ಹೆಚ್ಚು ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತೆ. ಇದೆಲ್ಲದರ ಪರಿಣಾಮ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನನ್ನನ್ನ ಪಕ್ಷ ನೆಗಲೆಟ್ ಮಾಡ್ತಿಲ್ಲ. ಇದ್ರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್ಲಾ ಕಾರ್ಯಕ್ರಮಗಳಿಗೆ ನಾನು ಹೋಗ್ತಾ ಇದ್ದೀನಿ. ಸರ್ಕಾರಿ ಕಾರ್ಯಕ್ರಮಕ್ಕೆ ನಾನು ಹೋಗೋದು ಸರಿಯಲ್ಲ ಅಂತ ಹೋಗಿಲ್ಲ ಅಷ್ಟೆ. ಆದರೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನನ್ನನ್ನ ಯಾರೂ ಕರೆಯಬೇಕಾಗಿಲ್ಲ. ನನ್ನ ಕರ್ತವ್ಯ ನಾನು ಮಾಡ್ತೀನಿ. ಈ ಕಾರ್ಯಕ್ರಮಕ್ಕೆ ಕೊನೆ ಘಳಿಗೆಯಲ್ಲಿ ಆಹ್ವಾನ ಬಂದಿಲ್ಲ. ನಾನು ಹೋಗೋ ಸ್ಥಿತಿಯಲ್ಲಿ ಇರಲಿಲ್ಲ ಅದಕ್ಕೆ ಹೋಗಿರಲಿಲ್ಲ. ನಡ್ಡಾ ಬರ್ತಿದ್ದಾರೆ ಅದಕ್ಕೆ ಹೋಗ್ತಿದ್ದೇನೆ. ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ಪ್ರಶ್ನೆ ಹಾಗೂ ಆರೋಪದಲ್ಲಿ ಸತ್ಯಾಂಶ ಇಲ್ಲ’ ಎಂದು ಬಿಎಸ್ವೈ ಸ್ಪಷ್ಟನೆ ನೀಡಿದ್ದಾರೆ.
ಯಾರು ಯಾರನ್ನು ಮುಗಿಸಲು ಸಾಧ್ಯವಿಲ್ಲ ಎಂದ ಯಡಿಯೂರಪ್ಪ, ನಾನು ಪಕ್ಷ ಕಟ್ಟಿ ಬೆಳೆಸಿದ್ದೇನೆ. ಪಕ್ಷ ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಇದನ್ನೆ ಮುಂದುವರೆಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು.
























































