ಬೆಂಗಳೂರು: ಸಚಿವ ಉಮೇಶ್ ಕತ್ತಿ ಅವರು ನನ್ನ ವೈಯಕ್ತಿಕ ಮಿತ್ರರಾಗಿದ್ದರು. ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಪಕ್ಷದ ಬಲಿಷ್ಠ ಸಂಘಟನೆ ಬಗ್ಗೆ ವಿಚಾರಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಅವರ ನಿಧನದಿಂದ ಕರ್ನಾಟಕ, ಪಕ್ಷ ಮತ್ತು ವೈಯಕ್ತಿಕವಾಗಿ ಅಪಾರ ನಷ್ಟವಾಗಿದೆ ಎಂದು ತಿಳಿಸಿದರು. ಅವರ ಹುಟ್ಟೂರಿಗೆ ತೆರಳಿ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸುವೆ. ಶ್ರದ್ಧಾಂಜಲಿ ಸಮರ್ಪಿಸುವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿನ್ನೆಯೇ ಬೆಳಗಾವಿಗೆ ಬರಲು ಯೋಚಿಸಿದ್ದೆ. ಆದರೆ, ವಿಮಾನ ಸಿಗದ ಕಾರಣ ಬರಲಾಗಲಿಲ್ಲ. ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ಅತ್ಯಂತ ಬೇಸರ ತಂದಿದೆ ಎಂದು ತಿಳಿಸಿದರು.
ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಮಾತನಾಡಿ, ಉಮೇಶ್ ಕತ್ತಿ ಅವರ ನಿಧನದಿಂದ ವೈಯಕ್ತಿಕವಾಗಿ ಹಾಗೂ ಇಡೀ ನಾಡಿಗೇ ತುಂಬಲಾರದ ನಷ್ಟವಾಗಿದೆ. ತೀವ್ರ ಎದೆನೋವು ಉಂಟಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮೊದಲನೇ ಫೋನ್ ಕರೆ ನನಗೆ ಬಂದಿತ್ತು. ವಿಷಯ ತಿಳಿದ ಏಳೆಂಟು ನಿಮಿಷಕ್ಕೇ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಹಿರಿಯ ಹೃದಯ ತಜ್ಞರನ್ನು ಕರೆಸಿಕೊಂಡು ಸತತ ಪ್ರಯತ್ನ ಮಾಡಲಾಗಿತ್ತು. ಆದರೆ, ವಿಧಿಯಾಟದ ಮುಂದೆ ನಮ್ಮ ಪ್ರಯತ್ನ ಫಲ ಕೊಡಲಿಲ್ಲ ಎಂದು ಬೇಸರ ಸೂಚಿಸಿದರು.
ಅವರ ಯೋಜನೆಗಳನ್ನು ನಮ್ಮ ಸರಕಾರ ಅನುಷ್ಠಾನಕ್ಕೆ ತರಲಿದೆ ಎಂದು ಅವರು ತಿಳಿಸಿದರು. ಅವರ ಆಶಯಗಳನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಮಾತನಾಡಿ, ಉಮೇಶ್ ಕತ್ತಿ ಅವರ ಆಶಯಗಳನ್ನು ಸರಕಾರ ಅನುಷ್ಠಾನಕ್ಕೆ ತರಲಿದೆ ಎಂದು ಭರವಸೆ ನೀಡಿದರು.