ಬೆಂಗಳೂರು: ದೆಹಲಿಯ ರೈತರ ಹೋರಾಟ ಬೆಂಬಲಿಸಿ 9ನೇ ದಿನದಂದು ಬೆಂಗಳೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ನೂರಾರು *ರೈತರು ಅರಬೆತ್ತಲೆ ಮಾಡಿ ಬಾರುಕೋಲು ಬೀಸುವ ಮೂಲಕ, ಸರ್ಕಾರಕ್ಕೆ ಎಚ್ಚರಿಸಿ ಧರಣಿ ನಡೆಸಿದರು.
ಹೊಡಿರಪ್ಪ ಹೊಡೆಯಿರಿ, ಸರ್ಕಾರಕ್ಕೆ ಬಾರುಕೋಲುನಿಂದ ಹೊಡೆಯಿರಿ ಎನ್ನುತ್ತಾ, ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಇಂದಿನ ರೈತ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ವಕೀಲರ ಸಂಘ ಬೆಂಬಲ ಸೂಚಿಸಿ 17 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದರು, ಅಖಂಡ ಕರ್ನಾಟಕ ರೈತ ಸಂಘದ ಸುಧೀರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರಣ್ಣಗೌಡ, ಗದಗ್, ಶಿವಮೊಗ್ಗದ ದೇವಕುಮಾರ್ ಮಾತನಾಡಿದರು ಸಿಐಟಿಯು ಕಾರ್ಯದರ್ಶಿ ಕುಮಾರಿ, ಷಿರಿಮನೆ ನಾಗರಾಜ್, ಹತ್ತಳ್ಳಿ ದೇವರಾಜ್, ಪ್ರಾಂತ ರೈತ ಸಂಘದ ಯಶವಂತ, ರೈತ ಮುಖಂಡ ಈರಣ್ಣ ಕಿರಗಸೂರು ಶಂಕರ್ ಭಾಗ್ಯರಾಜ್ ಎಂ ಬಿ ಚೇತನ್, ಬರಡನಪುರ ನಾಗರಾಜ್ ಮುಂತಾದವರಿದ್ದರು.
ಚಳುವಳಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ದೆಹಲಿ ರೈತ ಚಳುವಳಿಯನ್ನು ದಿಕ್ಕು ತಪ್ಪಿಸಲು ವಾಮಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು,
ರೈತರನ್ನು ಬೀದಿಗೆ ತಳ್ಳಿ ರೈತ ದಿನಾಚರಣೆ ಮಾಡುವುದು ಕೇಂದ್ರ ಸರಕಾರಕ್ಕೆ ಶೋಭೆ ತರುವುದಿಲ್ಲ,. ಸುಗ್ರಿವಾಜ್ಞೆ 3 ಕಾಯ್ದೆಗಳಿಂದ ರೈತರಿಗೆ ಮಾರಕ ಪರಿಣಾಮ ಎಂದು ಬಿಜೆಪಿ ಸಹ ಸಂಘಟನೆಯ ಭಾರತೀಯ ಕಿಸಾನ್ ಸಂಘ ಹಾಗೂ ಸ್ವದೇಶಿ ಜಾಗರಣ ಮಂಚ್ ಬಹಿರಂಗವಾಗಿ ಹೋರಾಟಕ್ಕಿಳಿದಿದೆ, ಆದರೂ ಇದನ್ನು ಗಮನಿಸದೆ ಕೇಂದ್ರದ ಮಂತ್ರಿಗಳು ಕಾಯ್ದೆಗಳು ರೈತರಿಗೆ ಹೆಚ್ಚಿನ ಅನುಕೂಲ ಎಂದು ಬಿಂಬಿಸುತ್ತಿವೆ ಎಂದವರು ದೂರಿದರು.
ಕಾರ್ಪೊರೇಟ್ ಕಂಪನಿಗಳ ಮರ್ಜಿಯಲ್ಲಿ ಕಾನೂನುಗಳು ರಚನೆಯಾಗುತ್ತಿವೆ. ಸರ್ಕಾರಗಳು ಜಾರಿ ಮಾಡುವ ಕೆಲಸ ಮಾತ್ರ ಮಾಡುತ್ತಿದೆ, ದುಡಿಯುವ ವರ್ಗ ಕೂಲಿ ಕಾರ್ಮಿಕರು ರೈತರು, ಕಾರ್ಖಾನೆ ಕಾರ್ಮಿಕರುಗಳನು ಕಂಪನಿಗಳ ಗುಲಾಮರಾಗಿ ಮಾಡಲು ಇಂಥ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ, ಪ್ರಧಾನಿಯವರು ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಬಜೆಟ್ನಲ್ಲಿ ಘೋಷಿಸಿ ಮೂರು ಬಾರಿ ಪ್ರಚಾರ ಪಡೆದಿದ್ದಾರೆ ಈಗ ರೈತರ ಕಣ್ಣಿಗೆ ಮಣ್ಣೆರಚಲು ಮುಂದಾಗುತ್ತಿದ್ದಾರೆ ಎಂದವರು ಆಕ್ರೋಶ ಹೊರಹಾಕಿದರು.
ರೈತರ ಬಗ್ಗೆ ಕಾಳಜಿ ಇದ್ದರೆ ಹೋರಾಟ ನಿರತ ರೈತ ಮುಖಂಡರ ಜೊತೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಲಿ ಎಂದರ ಅವರು, ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ 3500 ಕೋಟಿ ಬಿಡುಗಡೆ ಎಂಬುದು ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ಸಹಾಯಕವಾಗಿದೆ, ರೈತರಿಗಲ್ಲ, ಇದನ್ನು ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಸುದ್ದಿ ಎಂದು ಬಿಂಬಿಸಲಾಗುತ್ತಿದೆ ಎಂದರು,