ಚೆನ್ನೈ: ಚಿತ್ರಮಂದಿರಗಳಲ್ಲಿ ತಿನಿಸು ಮತ್ತು ತಂಪು ಪಾನೀಯಗಳ ಅತಿಯಾದ ಬೆಲೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ ನಿಖಿಲ್ ಸಿದ್ಧಾರ್ಥ, ಕನಿಷ್ಠ ನೀರಿನ ಬಾಟಲಿಗಳನ್ನು ಪ್ರೇಕ್ಷಕರು ಒಳಗೆ ತರಲು ಅವಕಾಶ ನೀಡಬೇಕೆಂದು ಪ್ರತಿಪಾದಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ‘X’ ಮೂಲಕ ಮನವಿ ಮಾಡಿರುವ ನಿಖಿಲ್, ಟಿಕೆಟ್ ದರಗಳಿಗೇ ಹೆಚ್ಚು ಹಣ ಹೋಗುತ್ತಿದೆ ಎಂಬುದರ ಜೊತೆಗೇ, ಪಾಪ್ಕಾರ್ನ್ ಹಾಗೂ ಸಾಫ್ಟ್ ಡ್ರಿಂಕ್ಗಳಿಗೆ ಮತ್ತಷ್ಟು ಹಣ ಕೊಡುವ ಸ್ಥಿತಿಯಾಗಿದೆ. ಇತ್ತೀಚೆಗಷ್ಟೇ ನಾನು ಒಂದು ಚಿತ್ರ ನೋಡಿದಾಗ, ತಿಂಡಿಗಳಿಗೆ ಚಿತ್ರಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದೇನೆ. ಇದರ ಪರಿಹಾರಕ್ಕೆ ವಿತರಣಾ ವಲಯಗಳು ಗಮನಹರಿಸಬೇಕು. ಕನಿಷ್ಠ ನೀರಿನ ಬಾಟಲಿಯನ್ನು ತಂದೊಯ್ಯುವ ಅವಕಾಶ ಕೊಡಿಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರರಂಗದಲ್ಲಿ ವೇಗವಾಗಿ ಬೆಳೆದ ನಟರಲ್ಲಿ ಒಬ್ಬರಾದ ನಿಖಿಲ್, ಪ್ರಸ್ತುತ ತನ್ನ ಮುಂದಿನ ಬಹುಭಾಷಾ ಚಿತ್ರ ‘ಸ್ವಯಂಭು’ ಮೂಲಕ ಮತ್ತೆ ಗಮನಸೆಳೆದಿದ್ದಾರೆ. ಸ್ವಯಂಭು ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಿಖಿಲ್ ಪೌರಾಣಿಕ ಯೋಧನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈ ಭರತ ಕೃಷ್ಣಮಾಚಾರಿ ನಿರ್ದೇಶನದ ಚಿತ್ರದಲ್ಲಿ ಸಂಯುಕ್ತಾ ಮತ್ತು ನಭಾ ನಟೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರೇಕ್ಷಕರಿಗಾಗಿ ಟೀಸರ್ ಬಿಡುಗಡೆ ಮಾಡುವ ಯೋಚನೆಯಿದೆ. ಈ ವರ್ಷ ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಕರು ಯೋಚಿಸುತ್ತಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಪಿಕ್ಸೆಲ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭುವನ್ ಮತ್ತು ಶ್ರೀಕರ್ ನಿರ್ಮಾಣದ ಈ ಚಿತ್ರಕ್ಕೆ ಟ್ಯಾಗೋರ್ ಮಧು ಪ್ರಸ್ತುತಪಡಿಸುತ್ತಿದ್ದು, ಸಂಗೀತವನ್ನು ರವಿ ಬಸ್ರೂರ್ ನೀಡಿದ್ದಾರೆ. ಛಾಯಾಗ್ರಹಣ ಕೆ.ಕೆ. ಸೆಂಥಿಲ್ ಕುಮಾರ್, ಸಂಕಲನ ತಮ್ಮಿರಾಜು, ಕಲೆ ನಿರ್ದೇಶನ ಎಂ. ಪ್ರಭಾಹರನ್ ಮತ್ತು ರವೀಂದ್ರ ಅವರದ್ದು. ಆಕ್ಷನ್ ಸಂಯೋಜನೆ ‘ಕಿಂಗ್’ ಸೊಲೊಮನ್ ಮತ್ತು ಸ್ಟಂಟ್ ಸಿಲ್ವಾ ಅವರಿಂದ ನಡೆದಿದೆ.
ಇತ್ತೀಚೆಗಷ್ಟೆ ಬಿಡುಗಡೆಯಾದ ಪೋಸ್ಟರ್ನಲ್ಲಿ, ನಿಖಿಲ್ ಕತ್ತಿಯನ್ನು ಹಿಡಿದುಕೊಂಡು ಯುದ್ಧಕ್ಕೆ ಸಜ್ಜಾಗಿರುವ ದೃಶ್ಯ ಹಾಗೂ ಸಂಯುಕ್ತಾ ಬಿಲ್ಲು-ಬಾಣದೊಂದಿಗೆ ನಿಂತಿರುವ ಶಕ್ತಿ ಪ್ರಭಾವಿತ ದೃಶ್ಯಗಳು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿವೆ. ಹಿನ್ನಲೆಯಲ್ಲಿ ಕಾಣುವ ‘ಸೆಂಗೋಲ್’ ಎಂಬ ಶಕ್ತಿಯ ಸಂಕೇತ, ಈ ಚಿತ್ರದ ತಾತ್ವಿಕ ಅಡಿಗಲ್ಲಾಗಿರುವ ಸೂಚನೆ ನೀಡಿದೆ.