ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕೈಗೊಳ್ಳುತ್ತಿರುವ ನಿರ್ಣಯವು ನಿಯಮ ಬಾಹಿರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸಭಾ ಅಧಿವೇಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ನಿಯಮಾವಳಿಗಳನ್ನು ಮೀರಿ ಕೇಂದ್ರ ಸರ್ಕಾರವನ್ನು ತೆಗಳುವ ನಿರ್ಣಯವನ್ನು ಮಂಡಿಸಿದ್ದಾರೆ. ನಿಯಮ ಪ್ರಕಾರ ಎಲ್ಲರಿಗೂ ಏಳು ದಿನ ಮುನ್ನ ನೋಟಿಸ್ ನೀಡಬೇಕು. ಮುಖ್ಯಮಂತ್ರಿ ದೌರ್ಜನ್ಯ ಮಾಡಿ, ಕೇಂದ್ರ ಸರ್ಕಾರವನ್ನು ಕೆಟ್ಟ ರೀತಿಯಲ್ಲಿ ಬೈದಿದ್ದಾರೆ. ಇದು ಸದನದ ನಿರ್ಣಯ ಎಂದು ದೂರಿದರು.
ಇದನ್ನು ಕಾಂಗ್ರೆಸ್ ಸರ್ಕಾರದ ನಿರ್ಣಯ, ರಾಹುಲ್ ಗಾಂಧಿಯ ನಿರ್ಣಯ ಎಂದು ಹೇಳಬೇಕು ಎಂದು ಟೀಕಿಸಿದ ಅಶೋಕ್, ಅಧಿವೇಶನದಲ್ಲಿ ನಿಯಮಬಾಹಿರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜ್ಯಕ್ಕೆ ವಿಮಾನ ನಿಲ್ದಾಣ, ಮೆಟ್ರೊ ತಂದರು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸಿದರು. ಇದನ್ನು ಮುತ್ಸದ್ಧಿತನ ಎನ್ನುತ್ತಾರೆ. ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರ ಅಭಿವೃದ್ಧಿ ಹಾಗೂ ಪಕ್ಷದ ಅಭಿವೃದ್ಧಿ ಮಾತ್ರ ಬೇಕಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ನಾಯಕ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಲ್ಲಿ ಮಾತನಾಡಲು ಆಗಿಲ್ಲ. ಇಲ್ಲಿನ ಅಧಿವೇಶನದಲ್ಲಿ ಉತ್ತರನ ಪೌರುಷ ತೋರಿಸಿದ್ದಾರೆ. ಈ ನಿರ್ಣಯ ಸದನದ ನಿರ್ಣಯ ಅಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಎಂದಿಗೂ ಜಿಎಸ್ಟಿ ಸಭೆಗೆ ಹೋಗಿಲ್ಲ. ಪ್ರಧಾನಮಂತ್ರಿ ಕರೆದ ಸಭೆಗೆ ಹಾಜರಾಗಿಲ್ಲ. ಆದರೆ ಇಲ್ಲಿ ಬಂದು ಜಿಎಸ್ಟಿಯಲ್ಲಿ ಅನ್ಯಾಯವಾಗಿದೆ ಎನ್ನುತ್ತಾರೆ. ಅಬಕಾರಿ ಇಲಾಖೆಯ ಹಗರಣವನ್ನು ಮರೆಮಾಚಲು ಕೇಂದ್ರ ಸರ್ಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು, ಸೋನಿಯಾ ಗಾಂಧಿಯನ್ನು ಇಷ್ಟಪಡಿಸಲು ಹೀಗೆ ಮಾಡಿದ್ದಾರೆ. ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದರು.
























































