ಬೆಳಗಾವಿ: ಪ್ರಾದೇಶಿಕ ವಿಮಾನ ಸಂಪರ್ಕವನ್ನು ಬಲಪಡಿಸಲು ಉಡಾನ್ ಸೇವೆ 10ವರ್ಷಗಳಿಗೆ ಮುಂದುವರೆಸುವ ಅಗತ್ಯವಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಹಾಗೂ ಇಲ್ಲಿನ ಕಟ್ಟಡಗಳ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಿದೆ.ಉಡಾನ್ ಯೋಜನೆ ಈ ಮಾರ್ಗದಲ್ಲಿ ಕೇವಲ 3 ವರ್ಷಗಳ ಕಾಲ ಮಾತ್ರ ಜಾರಿಯಲ್ಲಿದ್ದು, ನಂತರ ಸ್ಥಗಿತಗೊಂಡಿವೆ. ಈ ಮಾರ್ಗದಲ್ಲಿ ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಯ ವಿಮಾನ ಸೇವೆಯನ್ನು ಮುಂದುವರಿಸುವ ಉದ್ದೇಶದಿಂದ, ಉಡಾನ್ ಯೋಜನೆಯಡಿ ಅರ್ಹ ನಿರ್ವಾಹಕರಿಂದ ಹೊಸದಾಗಿ ಬಿಡ್ಗಳನ್ನು ಆಹ್ವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನಾಗರಿಕ ವಿಮಾನ ಮಾರ್ಗಗಳಿಗೆ ನೀಡಲಾಗುತ್ತಿರುವ ಹಣಕಾಸು ನೆರವು ಪ್ರಸ್ತುತ ಕೇವಲ 3 ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ಈ ಅವಧಿ ಮುಗಿದ ಬಳಿಕ ಹಲವು ಪ್ರದೇಶಗಳಲ್ಲಿ ವಿಮಾನ ಸೇವೆಗಳು ಸ್ಥಗಿತಗೊಳ್ಳುತ್ತಿದೆ. ಪ್ರಯಾಣಿಕರ ಸಂಖ್ಯೆ ಹಾಗೂ ಮಾರ್ಗದ ಸ್ಥಿರತೆ ಸಾಧಿಸಲು ಮೂರು ವರ್ಷಗಳ ಅವಧಿ ಸಾಕಾಗುವುದಿಲ್ಲ. ಆದ್ದರಿಂದ ಈ ಹಣಕಾಸು ನೆರವಿನ ಅವಧಿಯನ್ನು ಕನಿಷ್ಠ 7ರಿಂದ 10 ವರ್ಷಗಳವರೆಗೆ ವಿಸ್ತರಿಸುವ ಅಗತ್ಯವಿದೆ ಎಂದವರು ತಿಳಿಸಿದರು.
ದೀರ್ಘಾವಧಿಯ ಹಣಕಾಸು ಭರವಸೆ ನೀಡಿದರೆ ಮಾತ್ರ ಸಣ್ಣ ಹಾಗೂ ಮಧ್ಯಮ ನಗರಗಳ ವಿಮಾನ ಸಂಪರ್ಕ ನಿರಂತರವಾಗಿ ಉಳಿಯಲು ಸಾಧ್ಯವಾಗುತ್ತದೆ. ಈ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ರಾಜ್ಯ ಸರ್ಕಾರದಿಂದ ಅಧಿಕೃತ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬೀದರ್ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳನ್ನು ಮುಂದುವರಿಸಲು ಕೆ.ಕೆ.ಆರ್.ಡಿ.ಬಿ. ಆರ್ಥಿಕ ನೆರವು ನೀಡಿತ್ತು. ಆದರೆ ಈ ನೆರವು ತಾತ್ಕಾಲಿಕ ಉಪಶಮನವಾಗಬಹುದೇ ಹೊರತು, ಶಾಶ್ವತ ಹಾಗೂ ಸುಸ್ಥಿರ ವಿಮಾನಯಾನ ಸೇವೆಗೆ ಸಾಕಾಗುವುದಿಲ್ಲ ಎಂದು ತಿಳಿಸಿದರು.
ಕಲಬುರಗಿ, ಬೀದರ್ ಮಾತ್ರವಲ್ಲದೆ, ದೇಶದಾದ್ಯಂತ ಪ್ರಾದೇಶಿಕ ವಿಮಾನ ಸಂಪರ್ಕವನ್ನು ಬಲಪಡಿಸುವ ದೃಷ್ಟಿಯಿಂದ ಉಡಾನ್ ಯೋಜನೆಯನ್ನು ಕನಿಷ್ಠ 10 ವರ್ಷಗಳವರೆಗೆ ಮುಂದುವರಿಸುವುದು ಅತ್ಯಾವಶ್ಯಕವಾಗಿದೆ ಎಂದರು.






















































