ಬೆಂಗಳೂರು: ಭಾರತೀಯ ಸೇನೆ 100 ಕ್ಕೂ ಅಧಿಕ ಭಯೋತ್ಪಾದಕರನ್ನು ನಾಶ ಮಾಡಿದೆ. ಕದನ ವಿರಾಮ ಘೋಷಣೆಯಾದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು. ಯುದ್ಧಕ್ಕೆ ಮುನ್ನ ಶಾಂತಿಯ ಮಾತು ಆಡುತ್ತಾರೆ, ಕದನ ವಿರಾಮವಾದಾಗ ಯುದ್ಧ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ಜೊತೆಗೆ ಅಧಿವೇಶನ ನಡೆಸಬೇಕೆಂದು ಕೇಳುತ್ತಾರೆ. ಆದರೆ ಇದು ಅಧಿವೇಶನ ನಡೆಸುವ ಸಮಯವಲ್ಲ. ನಮ್ಮ ಯೋಧರು ಸಾಕ್ಷಿಗಳನ್ನು ನೀಡಿದ್ದಾರೆ. ಇನ್ನು ಮುಂದೆ ಯಾರೂ ಸಾಕ್ಷಿ ಕೇಳಬಾರದು. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಬಗ್ಗೆ, ಸಿಂದೂ ನದಿ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿ ಈಗಾಗಲೇ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ನವರು ರಾಜಕಾರಣ ಮಾಡುವುದು ಬಿಟ್ಟು ಯೋಧರಿಗೆ ಬೆಂಬಲ ನೀಡಬೇಕು. ಈ ಹಿಂದೆ ಪಿಒಕೆ ಬಿಟ್ಟುಕೊಟ್ಟಿದ್ದು, ಮುಂಬೈ ದಾಳಿ ಮೊದಲಾದವುಗಳ ಬಗ್ಗೆ ನಾವೇನೂ ಪ್ರಶ್ನೆ ಮಾಡುತ್ತಿಲ್ಲ. ಈ ಘಟನೆಗೆ ಇಂದಿರಾಗಾಂಧಿಯವರ ಹೋಲಿಕೆ ಮಾಡುವ ಅಗತ್ಯವಿಲ್ಲ. ಬಾಂಗ್ಲಾದೇಶದ ರಚನೆಯಾಯಿತು ಎನ್ನುವುದಾದರೆ ಪಿಒಕೆ ಯಾಕೆ ಬಿಟ್ಟಿದ್ದೀರಿ ಎಂಬ ಪ್ರಶ್ನೆ ಬರುತ್ತದೆ. ಆದರೆ ಇದರ ಬಗ್ಗೆ ನಾವ್ಯಾರೂ ಮಾತಾಡುತ್ತಿಲ್ಲ. ಇಂತಹ ಮಾತನಾಡಲು ಇದು ಸಮಯ ಅಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಂದಲೂ ಯುದ್ಧ ಬೇಡ ಎಂದರು. ಕಾಂಗ್ರೆಸ್ ಪಕ್ಷ ಶಾಂತಿ ಎಂದು ಟ್ವೀಟ್ ಮಾಡಿತ್ತು. ಈ ನಡುವೆ ಸಚಿವ ಕೃಷ್ಣ ಭೈರೇಗೌಡ ಉಲ್ಟಾ ಮಾತಾಡುತ್ತಿದ್ದಾರೆ. ಇಲ್ಲಿ ನಾವು ಏನೇ ಮಾತಾಡಿದರೂ ಭಾರತೀಯ ಸೇನೆಯ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಕದನ ವಿರಾಮ ಕೂಡ ಸೇನಾಧಿಕಾರಿಗಳು ಕೈಗೊಂಡ ತೀರ್ಮಾನವಾಗಿದೆ. ಕದನ ವಿರಾಮಕ್ಕೆ ಯಾರದ್ದೇ ಮಧ್ಯಸ್ಥಿಕೆ ಇರಲಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಯಾರದ್ದೇ ಮಧ್ಯಸ್ಥಿಕೆಯನ್ನು ಭಾರತ ಒಪ್ಪಲ್ಲ ಎಂದರು.