ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆ ಸಂಚು ಪ್ರಕರರಣ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದು ಚುನಾವಣಾ ಗಿಮಿಕ್ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಾ ರೌಡಿಗಳು ವಿಶ್ವನಾಥ್ ಜೊತೆಗಿದ್ದಾರೆ ಎಂದು ದೂರಿದರು. ವಿಶ್ವನಾಥ್ ಅವರ ದೂರಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಗೋಪಾಲಕೃಷ್ಣ ಅವರ ವಿಚಾರಣೆ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೂ ಈ ವಿಚಾರ ಗೊತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಬೆದರಿಸಲು ಈ ರೀತಿ ಮಾಡಲಾಗಿದೆ. ತಪ್ಪು ಮಾಡಿದವರನ್ನು ವಿಚಾರಣೆ ಮಾಡಲಿ. ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ತಪ್ಪು ಮಾಡಿದವರನ್ನು ನಾವು ರಕ್ಷಣೆ ಮಾಡುವುದಿಲ್ಲ. ಚುನಾವಣೆಯಲ್ಲಿ ಪ್ರಬಲವಾಗಿ ಎದುರಿಸುವವರಿಗೆ ಈ ರೀತಿ ಒತ್ತಡ ಹಾಕಲಾಗುತ್ತಿದೆ. ಬೆಂಗಳೂರಿನ ಎಲ್ಲ ರೌಡಿಗಳು ಅವರ ವಿಶ್ವನಾಥ್ ಜತೆಗೆ ಇದ್ದಾರೆ’ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಅವರ ವಿರುದ್ಧ ಎಸ್.ಟಿ. ಸೋಮಶೇಖರ್ ಅವರು ನೀಡಿರುವ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಡಿಕೆಸಿ, ‘ಬಿಜೆಪಿಯವರು ಯಾರನ್ನು ಜತೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೊತೆ ಇರುವವರ ವಿರುದ್ಧ ಎಂತಹ ಆರೋಪಗಳಿವೆ. ಮೊದಲು ಅವರ ತಟ್ಟೆ ಸ್ವಚ್ಛ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.