ಬೆಂಗಳೂರು, ಡಿ 13: ರಾಜಕಾರಣಿಗಳು ಮೀಡಿಯಾ ಹಾಗೂ ಸಮಾಜದ ಮುಂದೆ ಒಬ್ಬರಿಗೊಬ್ಬರು ಅದೆಷ್ಟೇ ಕಿತ್ತಾಡಿಕೊಂಡರೂ ನಿಜಜೀವನದಲ್ಲಿ ಅವರ ಸಂಬಂಧ ಚೆನ್ನಾಗಿಯೇ ಇರುತ್ತದೆ ಅಂತ ಜನಸಾಮಾನ್ಯರು ಹೇಳುವ ಮಾತಿದೆ..ಇದು ನಿಜವೇ ಬಿಡಿ..
ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಡುವಿನ ಜಗಳ, ಕಿತ್ತಾಟ ಇಂದು ನಿನ್ನೆಯದ್ದಲ್ಲ. ಸದನದಲ್ಲಿ ಮಾತ್ರವಲ್ಲದೆ, ವಿವಿಧ ಸಭೆಗಳಲ್ಲಿಯೂ ಒಬ್ಬರ ವಿರುದ್ಧ ಒಬ್ಬರು ವೀರಾವೇಶದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕುರುಬ ಸಮುದಾಯದ ಇಬ್ಬರ ನಡುವಿನ ರೋಷಾವೇಶಕ್ಕೆ ಹಲವು ಉದಾಹರಣೆಗಳಿವೆ. ‘ಸಿದ್ದರಾಮಯ್ಯ ಈ ಜೀವನದಲ್ಲಿ ಇನ್ನೊಮ್ಮೆ ಸಿಎಂ ಆಗುವುದಿಲ್ಲ. ಸಿದ್ದರಾಮಯ್ಯ ಒಬ್ಬ ಹುಚ್ಚ. ಹಾಗಾಗಿ ಎಷ್ಟುದಿನ ಬದುಕುತ್ತಾರೋ’ ಎಂದು ಈಶ್ವರಪ್ಪ ರಾಣೆಬೆನ್ನೂರಿನಲ್ಲಿ ಉಪ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು. ಇದಕ್ಕೆ ‘ನನ್ನ ಸಾವನ್ನು ಬಯಸುವವರಿಗೆ ನಾನು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ’ ಎಂಬ ತಣ್ಣನೆಯ ಪ್ರತಿಕ್ರಿಯೆಯನ್ನು ಸಿದ್ದರಾಮಯ್ಯ ನೀಡಿದ್ದರು.


ಹೀಗೆ ಕಿತ್ತಾಡಿಕೊಂಡರೂ ಸಿದ್ದರಾಮಯ್ಯ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡಾಗ ಅವರ ಯೋಗ ಕ್ಷೇಮ ವಿಚಾರಿಸಲು ಬಿಜೆಪಿ ನಾಯಕರು ಗುರುವಾರ ರಾತ್ರಿ ಆಸ್ಪತ್ರೆಗೆ ತೆರಳಿದ್ದರು. ಆಗ ಈಶ್ವರಪ್ಪ, ‘ನಿಮಗೂ ಹಾರ್ಟ್ ಇದೆ ಅಂತಾ ಗ್ಯಾರಂಟಿ ಆಯ್ತು’ ಎಂದು ಚಟಾಕಿ ಹಾರಿಸಿದ್ದರು. ಅದಕ್ಕೆ ಸಿದ್ದರಾಮಯ್ಯ, ‘ನನಗೆ ಹಾರ್ಟ್ ಇಲ್ಲ ಅಂದ್ಕೊಂಡ್ರಾ’ ಎಂದು ಪ್ರತಿಕ್ರಿಯೆ ನೀಡಿದ್ದರು.


ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ,ಹೊರಗಡೆ ನಾವೆಷ್ಟೇ ಬಡಿದಾಡಿಕೊಂಡರೂ, ನಮ್ಮ ಜಗಳವನ್ನು ವಿಧಾನಸಭೆಯಲ್ಲಿ ನೋಡಿದವರು ಇವರು ಸಾಯೋವರೆಗೂ ಮಾತೇ ಆಡೊಲ್ಲ ಎಂದುಕೊಳ್ಳುತ್ತಾರೆ. ಹಾಗೆ ಅಂದುಕೊಳ್ಳೋರು ದಡ್ಡರು. ನಾವಿಬ್ಬರು ಬುದ್ಧಿವಂತರು. ನನ್ನ ಕಡಿದರೂ ನಾನು ಪಕ್ಷ ಬಿಡುವುದಿಲ್ಲ. ನಮ್ಮ ಪಕ್ಷದ ಸುದ್ದಿಗೆ ಅವರು ಬಂದಾಗ ನಾನು ಸುಮ್ಮನೆ ಬಿಡುವುದಿಲ್ಲ. ಹಾಗೆಯೇ ಅವರ ಪಕ್ಷದ ಸುದ್ದಿಗೆ ನಾವು ಹೋದಾಗ ಅವರು ಬಿಡೊಲ್ಲ. ಇದು ಪಕ್ಷ ನಿಷ್ಠೆಯ ವಿಚಾರ.
ಎಲ್ಲರ ಜತೆಗೂ ಹೀಗೆ ಇರುತ್ತೇವೆ ನಮ್ಮ ನಡುವೆ ಅಪಾರ ವಿಶ್ವಾಸ, ಪ್ರೀತಿ ಇದೆ. ಸ್ನೇಹಕ್ಕೂ ರಾಜಕಾರಣಕ್ಕೂ ಎಂದೂ ಯಾರೂ ಒಂದಕ್ಕೊಂದು ಸಂಬಂಧ ತರಬಾರದು. ಅದು ಬೇರೆ ಇದು ಬೇರೆ. ಎಲ್ಲ ರಾಜಕಾರಣಿಗಳ ಜತೆಗೂ ನಾವು ಹೀಗೆಯೇ ಇದ್ದೇವೆ. ಕುಮಾರಸ್ವಾಮಿ ಅವರ ಬಳಿಯೂ ಹೀಗೆ ಇದ್ದೇವೆ, ದೊಡ್ಡೋರು ದೇವೇಗೌಡರ ಬಳಿ ನಾನು ಹೋಗೊಲ್ಲ. ಹೋಗೋದು ಕಡಿಮೆ ಎಂದು ಈಶ್ವರಪ್ಪ ಹೇಳಿದರು.