ನವದೆಹಲಿ,ಅ.23: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಕಳೆದ 48 ದಿನಗಳಿಂದ ತಿಹಾರ್ ಜೈಲು ಸೇರಿದ್ದ ಕನಕಪುರ ಬಂಡೆಗೆ ಸದ್ಯ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. 25 ಲಕ್ಷ ಬಾಂಡ್ ಜೊತೆಗೆ ಪಾಸ್ ಪೋಟ್ ಸರೆಂಡರ್ ಮಾಡಬೇಕು. ವಿದೇಶಿ ಪ್ರಯಾಣಕ್ಕೆ ಕೋರ್ಟ್ ಅನುಮತಿ ಪಡೆಯಬೇಕು. ವಿಚಾರಣೆಗೆ ಕರೆದಾಗಲೆಲ್ಲಾ ಬರಬೇಕು ಎಂದು ಅನೇಕ ಷರತ್ತುಗಳನ್ನು ಕೋರ್ಟ್ ಹಾಕಿದೆ.
ಹೈ ಬಿಪಿ,ಹೈ ಶುಗರ್ ಸೇರಿದಂತೆ ಅನೇಕ ಅನಾರೋಗ್ಯದ ಕಾರಣ ಈ ಹಿಂದೆಯೇ ದೆಹಲಿಯ ಆರ್ ಎಲ್ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಡಿಕೆಶಿ, ಇದೇ ನೆಪವನ್ನು ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ರು. ಕೋರ್ಟ್ ಈ ಅರ್ಜಿಯನ್ನು ಪರಿಗಣಿಸಿದ್ದು, ಸದ್ಯ ಷರತ್ತುಬದ್ಧ ಜಾಮೀನು ನೀಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ.
ಮುಂದಿನ ಪ್ರಕ್ರಿಯೆಗಳೇನು..?
ಈಗಾಗಲೇ ದಿನದ ಅರ್ಧ ಭಾಗ ಕಳೆದಿರುವುದರಿಂದ ಕೋರ್ಟ್ ಜಾಮೀನು ನೀಡಿದರೂ ಕೋರ್ಟ್ ಸಂಬಂಧಿತ ಪ್ರಕ್ರಿಯೆಗಳು ಮುಗಿಸುವ ವೇಳೆ ಕೋರ್ಟ್ ಸಮಯವೇ ಮುಗಿದಿರುತ್ತದೆ. ರೋಸ್ ಅವೆನ್ಯೂ ಕೋರ್ಟ್ ಮುಂದೆ ಇಬ್ಬರು ಶ್ಯೂರಿಟಿಗಳನ್ನು ಹಾಜರು ಪಡಿಸವುದರ ಜೊತೆಗೆ ಜಾಮೀನು ಅದೇಶ ಪ್ರತಿಯನ್ನು ಸಲ್ಲಿಸಬೇಕು. ಅಲ್ಲಿಂದ ತಿಹಾರ್ ಜೈಲಿಗೆ ಆ ಆದೇಶ ಪ್ರತಿಯನ್ನು ರವಾನಿಸಬೇಕು ಜಾಮೀನು ಮಂಜೂರು ಆದೇಶ ಪ್ರತಿಯನ್ನು ದೆಹಲಿ ಹೈಕೋಟ್ ನಿಂದ ಪಡೆಯಬೇಕು ಹೀಗೆ ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದಿದ್ದು ಸಮಯದ ಅಭಾವವೂ ಇರುವುದರಿಂದ ನಾಳೆಯ ವೇಳೆಗೆ ಡಿಕೆಶಿ ಜೈಲಿನಿಂದ ಹೊರಬರುವ ಸಾಧ್ಯತೆಯೇ ಹೆಚ್ಚು ಎಂಬುದಾಗಿ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.