ಸಂವತ್ಸರದ ಮೊದಲ ದಿನ ‘ಯುಗಾದಿ’ ಹನಬ್ಬ ನಾಡಿನಾದ್ಯಂತ ಸಂಭ್ಯಮ ಸಡಗರಕ್ಕೆ ಸಾಕ್ಷಿಯಾಗಿದೆ. ಭಾರತೀಯರ ಪಾಲಿಗೆ ಯುಗಾದಿಯಂದೇ ಹೊಸವರ್ಷಾಚರಣೆ. ಹಾಗಾಗಿ ಹೊಸ ಸಾಂತ್ಸರವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ. ಶುಭಾಶಯಗಳ ವಿನಿಮಯವೂ ಜೋರಾಗಿ ಸಾಗಿದೆ.
ಭಾರತೀಯ ಪರಂಪರೆಯಲ್ಲಿ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ಅದರಲ್ಲೂ ವರ್ಷಾರಂಭಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ.
ಭಾರತೀಯ ಪರಂಪರೆಯಲ್ಲಿ ಯುಗಾದಿಯೇ ಹೊಸವರ್ಷಾರಂಭ. ಯುಗದ ಆದಿಯೇ ಯುಗಾದಿ ಎಂಬ ಅರ್ಥದಲ್ಲಿ ಒಂದು ವರ್ಷದ ಅವಧಿಯ ಆದಿ ಇಂದು. ಹಾಗಾಗಿಯೇ ವ್ಯವಹಾರಿಕ ವರ್ಷಕ್ಕೆ ಕ್ಯಾಲೆಂಡರ್ ಆಧಾರವಾಗಿದ್ದರೆ, ಸಂಪ್ರದಾಯ, ಧಾರ್ಮಿಕ ಆಚರಣೆಗೆ ಸಂವತ್ಸರವೇ ಆಧಾರ. ಹಾಗಾಗಿ ಸಂವತ್ಸರದ ಮೊದಲ ದಿನ (ಆದ್ಯ ದಿನ) ಈ ‘ಯುಗಾದಿ’ಗೆ ಧಾರ್ಮಿಕ ಮಹತ್ವ ಇದೆ.
ಪ್ರಕೃತಿಯೂ ಸಹ ಹೊಸತನಕ್ಕೆ ಸಾಕ್ಷಿಯಾಗುತ್ತಿದೆ. ಈ ಸಮಯದಲ್ಲಿ ವೃಕ್ಷಗಳೂ ಹಳೇ ಎಲೆಗಳನ್ನು ಕಳೆದುಕೊಂಡು ಹೊಸ ಎಲೆಗಳೊಂದಿಗೆ ಚಿಗುರಿ ತನ್ನ ಯೌವ್ವನವನ್ನು ಮತ್ತೆ ಹೊಸದಾಗಿ ಆರಂಭಿಸುತ್ತದೆ. ಯುಗಾದಿಯ ದಿನದಂದೇ ಬ್ರಹ್ಮ ದೇವರು ಈ ಭೂಮಿಯನ್ನು ಸೃಷ್ಟಿಸಲು ಪ್ರಾರಂಭಿಸಿದರೆಂಬ ನಂಬಿಕೆಗೆ ಪ್ರಕೃತಿಯ ಈ ಬದಲವಣೆಯೂ ಉದಾಹರಣೆ ಅಂತಿದ್ದಾರೆ ಪಾಂಡಿತ್ಯವುಳ್ಳವರು.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಚೈತ್ರ ಮಾಸದ ಈ ದಿನವು ಯುಗದ ಆರಂಭವನ್ನು ಗುರುತಿಸುತ್ತದೆ. ಆದ್ದರಿಂದ, ಯುಗಾದಿ ಹಬ್ಬವು ಸಂವತ್ಸರದ ಆರಂಭದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.