ಮಂಗಳೂರು : ನಾಡು-ನುಡಿಯ ಗಟ್ಟಿತನಕ್ಕೆ ಶಿಕ್ಷಣ ಹಾಗೂ ಸಾಹಿತ್ಯವೇ ಆಧಾರ.. ಹೀಗಿರುವಾಗ ಮಾತೃಭಾಷೆ ಹಾಗೂ ಮಾತೃ ನೆಲದ ಬಗ್ಗೆ ಗೌರವ ಉಳಿಸೋಣ. ಆಗ ನಾವು ನಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು ಎಂದು ಶಿಕ್ಷಣ ತಜ್ಞ ಗಣೇಶ್ ರಾವ್ ಹೇಳಿದ್ದಾರೆ.
ರಾಜಕೀಯ ನಾಯಕರಿಗೆ, ಅಧಿಕಾರದ ಮದದಲ್ಲಿ ತೇಲುವ ಮಂದಿಯನ್ನು ತಮ್ಮ ಮೊಣಚು ಮಾತಿನಲ್ಲಿ ತಿವಿದ ಗಣೇಶ್ ರಾವ್, ‘ನಾವು ಮೊದಲು ನಮ್ಮತನವನ್ನು ಗೌರವಿಸಬೇಕು, ಆ ಮೂಲಕ ಎತ್ತರದ ಸ್ಥಾನದಲ್ಲಿರುವುದನ್ನು ತೋರಿಸಬೇಕು’ ಎಂದರು.
ಕರಾವಳಿ ಕಾಲೇಜುಗಳ ಸಮೂಹ ಹಾಗೂ ಜಿ.ಆರ್. ಎಜುಕೇಷನ್ ಟ್ರಸ್ಟ್ ಇದರ ಸ್ಥಾಪಕಧ್ಯಕ್ಷರೂ ಆದ ಎಸ್.ಗಣೇಶ್ ರಾವ್ ಅವರ ಅಭಿಪ್ರಾಯ ಹಾಗೂ ಮಾತಿನ ಚಾಟಿಯ ವೈಖರಿಯು ಪ್ರಸ್ತುತ ಇರುವ ರಾಜಕೀಯ ವ್ಯವಸ್ಥೆಯತ್ತ ಕೇಂದ್ರೀಕರಿಸಿದಂತಿತ್ತು. ನೆರೆದಿದ್ದ ಗಣ್ಯಾತಿಗಣ್ಯರ, ಸಭಿಕರ ಚಪ್ಪಾಳೆ ಗಿಟ್ಟಿಸಿದ ಭಾಷಣಕ್ಕೆ ಸಾಕ್ಷಿಯಾದದ್ದು ಮಂಗಳೂರಿನ ದಕ್ಷಿಣಕನ್ನಡ ಜಿಲ್ಲಾ 9ನೇ ಸಮ್ಮೇಳನೋತ್ತರ ಸಾಹಿತ್ಯ ಸಂಭ್ರಮ ಹಾಗೂ ವಿದ್ಯಾರ್ಥಿ ಅಭಿನಂದನ ಕಾರ್ಯಕ್ರಮ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಸಂಯುಕ್ತವಾಗಿ ಭಾನುವಾರ ಊರ್ವಸ್ಟೋರ್ ತುಳುಭವನದ ಸಿರಿಚಾವಡಿಯಲ್ಲಿ ಏರ್ಪಡಿಸಿದ್ದ ಈ ಸಾರಸ್ವತ ಜಾತ್ರೆಯು ಕಾರ್ಯಕ್ರಮ ನಾಡಿನ ಗಮನಸೆಳೆಯಿತು. ಹಲವಾರು ಪ್ರತಿಭಾನ್ವಿತರನ್ನು, ಸಾಹಿತಿಗಳನ್ನು ಸೃಷ್ಟಿಸಿರುವ ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸಿರುವ ಗಣೇಶ್ ರಾವ್ ಅವರು ತಮ್ಮ ಮಾತಿನ ಮೋಡಿಯಿಂದ ನುಡಿಸುಗ್ಗಿಯ ಕೇಂದ್ರಬಿಂದುವಾದರು.
ನಾವು ಎಷ್ಟೇ ಶ್ರೀಮಂತಿಕೆ ಗಳಿಸಿದರೂ ಎಷ್ಟೇ ವಿದ್ಯೆ ಕಲಿತರೂ ಬದುಕಿ ಬಾಳಿದ ನೆಲದ ಪರಂಪರೆಯನ್ನು ಮರೆಯಬಾರದು. ಸಮಾಜದಲ್ಲಿ ಬಡವ ಬಲ್ಲಿದ ಎಂಬ ತಾರತಮ್ಯ, ಯೋಚನೆಗಳಲ್ಲಿ ನಕಾರಾತ್ಮಕತೆ ಅಳಿದಾಗ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ ಎಂದ ಅವರು, ನಮ್ಮನ್ನು ನಾವು ಅರಿತು ಕೊಳ್ಳಬೇಕಾದರೆ ಮತ್ತು ತಿದ್ದಿಕೊಳ್ಳಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಎಲ್ಲರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ನಾವು ಎಷ್ಟೇ ಭಾಷೆಗಳನ್ನೂ ಕಲಿತರೂ ಮಾತೃ ಭಾಷೆಯನ್ನು ಮರೆಯಬಾರದು ಎಂದು ಗಣೇಶ್ ರಾವ್ ಪ್ರತಿಪಾದಿಸಿದರು.
‘ಮೆನ್ಕುನ ಸಿರಿ ಸಿಂಗಾರ’:
ಈ ಸಮ್ಮೇಳನದಲ್ಲಿ, ಹಿರಿಯ ನಾಟಕಕಾರ ಗಂಗಾಧರ ಕಿದಿಯೂರು ಅವರ 13 ನಾಟಕಗಳ ಸಂಪುಟ ‘ಮೆನ್ಕುನ ಸಿರಿ ಸಿಂಗಾರ’ ವನ್ನು ಬಿಡುಗಡೆಗೊಳಿಸಲಾಯಿತು. ಈ ಸಂಪುಟದಲ್ಲಿ ವಿಜಯಲಕ್ಷ್ಮಿ, ಬದುಕೊಂಜಿ ಸರಿಗಮ, ದೇವೆರ್ ಮಲ್ಲೆ,ತೆಲಿಕೆ ನಲಿಕೆದ ಬದ್ಕ್, ಪಿಂಗಾರೆದ ಬಾಲೆ ಸಿರಿ ಮೊದಲಾದ 14 ನಾಟಕಗಲಿವೆ. ಕೆಲವು ನಾಟಕಗಳು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿವೆ. ಕೃತಿ ಪರಿಚಯ ಮಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಆಚಾರ್ಯ ಈ ವಿಚಾರಗಳತ್ತ ಗಮನಸೆಳೆದರು.
ಇದೇ ವೇಳೆ, ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್ ಟಿ ಬಾಳೆಪುಣಿ (ಪತ್ರಿಕೋದ್ಯಮ), ಪೊಲೀಸ್ ನಿರೀಕ್ಷಕಿ ಭಾರತಿ (ಕಾನೂನು ಸುವ್ಯವಸ್ಥೆ), ಶಿವರಾಮ ಕಾಸರಗೋಡು (ಸಂಘಟನೆ), ನ್ಯಾಯವಾದಿ ದಯಾನಂದ ರೈ (ವಕಾಲತ್ತು), ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು (ರಂಗಭೂಮಿ), ಉಪನ್ಯಾಸಕ ಪ್ರಕಾಶ್ ಮೇಲಾಂಟ (ಶಿಕ್ಷಣ ), ಬಾಲಕೃಷ್ಣ ಕಾರಂತ್ (ಪೌರೋಹಿತ್ಯ) ಅವರನ್ನು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಾಯಿತು.
ಮಂಗಳೂರು ಚುಸಾಪ ಆಯೋಜಿಸಿದ್ದ ಚುಟುಕು ಸಪ್ತಾಹದಲ್ಲಿ ವಿಜೇತರಾದ ಹಿರಿಯ ಲೇಖಕಿ ಸತ್ಯವತಿ ಭಟ್ ಕೊಳಚಪ್ಪು ಮತ್ತು ಸೌಮ್ಯ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ನೃತ್ಯ ಸಂಗಮ ಕಾರ್ಯಕ್ರಮದಲ್ಲಿ ಲಾಲಿತ್ಯ ಬೇಲೂರು,ಸುದೀಷ್ಣ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಪ್ರಾಪ್ತಿ ಶೆಟ್ಟಿ ಅಪೂರ್ವ ಸೋಮೇಶ್ವರ ಅವರಿಂದ ವಿಶಿಷ್ಟ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ಸತ್ಯವತಿ ಭಟ್ ಮತ್ತು ಸೌಮ್ಯ ಗೋಪಾಲ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಚುಟುಕು ಕವಿಗೋಷ್ಠಿಯಲ್ಲಿ 30ಕ್ಕೂ ಅಧಿಕ ಕವಿಗಳು ತಮ್ಮ ಚುಟುಕುಗಳನ್ನು ಪ್ರಸ್ತುತ ಪಡಿಸಿದರು.
9ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಕೃಷ್ಣಯ್ಯ ಅನಂತಪುರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್ಸಾರ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಪತ್ರಿಕೆ ಸಂಪಾದಕ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಗಂಗಾಧರ್ ಕಿದಿಯೂರು, ದಕ್ಷಿಣ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು,ಮಂಗಳೂರು ತಾಲೂಕು ಮತ್ತು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಗೌರಧ್ಯಕ್ಷ ಇರಾ ನೇಮು ಪೂಜಾರಿ, ಮೂಲ್ಕಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನರೇಂದ್ರ ಕೆರೆಕಾಡು, ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಚಂದ್ರಹಾಸ್ ಉಪಸ್ಥಿತರಿದ್ದರು.





















































ಇದೇ ವೇಳೆ, ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್ ಟಿ ಬಾಳೆಪುಣಿ (ಪತ್ರಿಕೋದ್ಯಮ), ಪೊಲೀಸ್ ನಿರೀಕ್ಷಕಿ ಭಾರತಿ (ಕಾನೂನು ಸುವ್ಯವಸ್ಥೆ), ಶಿವರಾಮ ಕಾಸರಗೋಡು (ಸಂಘಟನೆ), ನ್ಯಾಯವಾದಿ ದಯಾನಂದ ರೈ (ವಕಾಲತ್ತು), ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು (ರಂಗಭೂಮಿ), ಉಪನ್ಯಾಸಕ ಪ್ರಕಾಶ್ ಮೇಲಾಂಟ (ಶಿಕ್ಷಣ ), ಬಾಲಕೃಷ್ಣ ಕಾರಂತ್ (ಪೌರೋಹಿತ್ಯ) ಅವರನ್ನು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಾಯಿತು.