ಬೆಂಗಳೂರು: ತಾಯಂದಿರ, ಸಹೋದರಿಯರ ಸಿಂಧೂರ ಅಳಿಸಿದವರನ್ನು ಸಿಂಧೂರ ಕಾರ್ಯಾಚರಣೆಯಲ್ಲಿ ಅಂತ್ಯ ಹಾಡಲಾಗಿದೆ. ಜಗತ್ತನ್ನೇ ನಿಬ್ಬೆರಗಾಗಿಸಿದ ಭಾರತೀಯ ಯೋಧರ ಸಾಧನೆ ಶ್ಲಾಘನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ ಹಿಂದೂಸ್ತಾನದ ತಾಯಂದಿರು ಮತು ಸಹೋದರಿಯರ ಸಿಂಧೂರ ಅಳಿಸಿದವರಿಗೆ ಪ್ರತ್ಯುತ್ತರವಾಗಿ ಆಪರೇಷನ್ ಸಿಂಧೂರ’ ಮೂಲಕ ಭಾರತೀಯ ಸೇನೆ ದಾಳಿ ನಡೆಸಿ ಪಾಕ್ ಉಗ್ರರನ್ನು ಮಟ್ಟಹಾಕಿರುವುದು ಶ್ಲಾಘನೀಯ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಧೀರ ಸೈನಿಕರಿಗೆ ಹೃದಯಾಂತರಾಳದ ಅಭಿನಂದನೆಗಳು ಎಂದು ಪದ್ಮರಾಜ್ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತಂತೆ ಮಾಧ್ಯಮ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾರತೀಯ ಸೇನೆ ನಮ್ಮ ಹೆಮ್ಮೆ.. ಸರ್ಕಾರದ ದಿಟ್ಟ ಕ್ರಮಕ್ಕೆ ಸ್ವಾಗತ. ನಾವು ಸದಾ ನಮ್ಮ ಸೇನೆ ಜತೆ ನಿಲ್ಲವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಸೇನೆಯ ಪ್ರತ್ಯುತ್ತರವು ಭಾರತದ ಮೇಲೆ ಸತತವಾಗಿ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ಪಾಠ ಮಾತ್ರವಲ್ಲ; ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೂ ನೀಡಿರುವ ಎಚ್ಚರಿಕೆ ಎಂದಿದ್ದಾರೆ.
ಪಾಕಿಸ್ತಾನದ ಸಾಮಾನ್ಯ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ, ಪಾಕಿಸ್ತಾನ ಮತ್ತು ಪಿಒಕೆನಲ್ಲಿ 21 ಉಗ್ರ ತರಬೇತಿ ಕೇಂದ್ರಗಳನ್ನು ಗುರುತು ಮಾಡಿ ಧ್ವಂಸಗೊಳಿಸಿರುವ ಧೀರ ಯೋಧರ ಕಾರ್ಯ ಮೆಚ್ಚುವಂಥದ್ದು. ಉಗ್ರರ ದಾಳಿಗೆ ಹಣದ ಸಹಾಯ ಮಾಡಿದವರಿಗೂ ತಕ್ಕ ಪಾಠ ಕಲಿಸಿದಂತಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಈ ಮೂಲಕ ನ್ಯಾಯ ಸಿಕ್ಕಿದೆ. ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಈ ದಾಳಿಯನ್ನು ಎಲ್ಲರೂ ಬೆಂಬಲಿಸಲೇಬೇಕು. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಭಾರತ ಸರ್ಕಾರ, ಸೇನೆ ಕೈಗೊಂಡಿರುವ ಕ್ರಮ ಹಾಗು ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ ಎಂದು ಪದ್ಮರಾಜ್ ಆರ. ಪೂಜಾರಿ ಹೇಳಿದ್ದಾರೆ.