ಬೆಂಗಳೂರು: ರಾಜಧಾನಿಯಲ್ಲಿ ಬೇಲ್ ಮಾಫಿಯಾವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು ನಕಲಿ ಜಾಮೀನುದಾರರ ತಂಡವನ್ನು ಬಂಧಿಸಿದ್ದಾರೆ.
ರಾಜಧಾನಿ ಬೆಂಗಳೂರು ಪೊಲೀಸರು ಇದೀಗ ಅಪರಾಧ ಜಗತ್ತಿನ ಬಗ್ಗೆ ಎಂದಿಲ್ಲದ ನಿಗಾ ವಹಿಸುತ್ತಿದ್ದಾರೆ. ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಬಿಗಿ ಕ್ರಮದಿಂದಾಗಿ ಪೊಲೀಸ ಅಧಿಕಾರಿಗಳು ನಿಷ್ಟೂರ ಕ್ರಮ ಜರುಗಿಸುವ ಅನಿವಾರ್ಯತೆಯಲ್ಲಿ ಸಿಲುಕಿದ್ದು ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಜೈಲು ಸೇರುತ್ತಿದ್ದಾರೆ. ಪೊಲೀಸ್ ಠಾಣೆಗಳ ಅಧಿಕಾರಿಗಳ ಮುಂದೆ ಆರೋಪಿಗಳು ಚಾಲಾಕಿತನ ಪ್ರದರ್ಶಿಸಿದರೂ, ಸಿಸಿಬಿ ಕಣ್ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಪ್ರಕರಣಗಳು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಹಾಗೂ ಸಿಸಿಬಿಯ ಡಿಸಿಪಿ ಅಬ್ದುಲ್ ಆಹದ್ ಅವರ ಕೈಸೇರುತ್ತಿದ್ದು, ಹಲವಾರು ನಿಗೂಢ ಪ್ರಕರಣಗಳು ಪತ್ತೆಯಾಗುತ್ತಿವೆ. ಇದೇ ಪೊಲೀಸ್ ತಂಡ ಇದೀಗ ‘ಬೇಲ್ ಮಾಫಿಯಾ’ವನ್ನೂ ಬೇಧಿಸಿರುವ ಕಾರ್ಯಾಚರಣೆಯೂ ರೋಚಕ.
ಬೆಂಗಳೂರಿನ ವಿವಿಧ ನ್ಯಾಯಾಲಯಗಳಿಂದ ಆರೋಪಿಗಳು ಜಾಮೀನು ಮಂಜೂರಾತಿ ಪಡೆಯಲು ನಕಲಿ ದಾಖಲೆಗಳನ್ನು ಈ ನಿಗೂಢ ಮಾಫಿಯಾ ಸಿದ್ದಪಡಿಸುತ್ತಿತ್ತು. ಈ ಬಗ್ಗೆ ಮಾಹಿತಿ ಆಧರಿಸಿ ಅಖಾಡಕ್ಕಿಳಿದ ಸಿಸಿಬಿ ತಂಡ 9 ಮಂದಿಯನ್ನು ಖೆಡ್ಡಕ್ಜೆ ಕೆಡವಿದೆ. ವಿವಿಧ ಪ್ರಕರಣಗಳಲ್ಲಿ ಬಂಧನ ಕ್ಕೊಳಗಾಗಿ ನ್ಯಾಯಾಲಯದಲ್ಲಿ ಜಾಮೀನು ಸಲ್ಲಿಸಿರುವ ಆರೋಪಿಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿದ್ದ ತಂಡ ಇದಾಗಿದೆ. ಓರ್ವ ಮಹಿಳೆ ಸೇರಿ 9 ಮಂದಿ ಆರೋಪಿಗಳು ಸೆರೆ ಸಿಕ್ಕಿದ್ದು ಮತ್ತಷ್ಟು ಮಂದಿಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರಿನ ತಬಸಮ್, ಪ್ರಕಾಶ್, ಕೋಲಾರ ಜಿಲ್ಲೆಯ ನಾಗರಾಜ್, ಮಂಜುನಾಥ್, ಮೈಸೂರು ನಂಜನಗೂಡಿನ ಉಮೇಶ್, ರಾಯಚೂರು ಮೂಲದ ಅಮರೇಶ್, ವೀರೇಶ್, ಕೊಪ್ಪಳ ಜಿಲ್ಲೆಯ ಉಮೇಶ್ ಕುಮಾರ್, ಸಂತೋಷ್ ಎಂಬವರನ್ನು ಬಂಧಿಸಿರುವ ಪೊಲೀಸರು ಈ ಬೇಲ್ ಅಕ್ರಮ ಸಂಬಂಧದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾಫಿಯಾವು ಜಾಮೀನು ಸಂಬಂಧ ಶ್ಯೂರಿಟಿ ನೀಡಲು 40-50 ಸಾವಿರ ರೂಪಾಯಿ ಪಡೆಯುತ್ತಿತ್ತು ಎನ್ಬಲಾಗಿದೆ. ಬಂಧಿತರಿಂದ 30ಕ್ಕೂ ಹೆಚ್ಚು ನಕಲಿ ಆಧಾರ್ ಕಾರ್ಡ್ಗಳನ್ನು, ಹಾಗೂ ಜಮೀನು ಸಂಬಂಧದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ, ಈ ಆರೋಪಿಗಳು ಈ ವರೆಗೆ ಎಷ್ಟು ಮಂದಿಗೆ ನಕಲಿ ದಾಖಲೆಗಳ ಮೂಲಕ ಶ್ಯೂರಿಟಿ ನೀಡಿದ್ದಾರೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ನಡುವೆ, ಈ ಕಾರ್ಯಾಚರಣೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಆರೋಪಿಗಳ ಮೂಲಕ ಜಾಮೀನು ಪಡೆದು ಬಂಧನದಿಂದ ಬಿಡುಗಡೆಯಾಗಿರುವ ಮಂದಿಯಲ್ಲಿ ನಡುಕ ಸೃಷ್ಟಿಯಾಗಿದೆ.