ಬೆಂಗಳೂರು: ರಾಜ್ಯ ಸರಕಾರವು ಸಾರ್ವಜನಿಕ ಹಿತಾಸಕ್ತಿಯಿಂದ ವಿಧಿಸಲದ ಕೋವಿಡ್ ನಿರ್ಭಂಧ ಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು ಹಾಗೂ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಉದ್ದೇಶಿತ ಪಾದಯಾತ್ರೆ ಕಾರ್ಯಕ್ರಮದ ಬಗ್ಗೆ ಮರು ಆಲೋಚಿಸಿ, ಮುಂದಕ್ಕೆ ಹಾಕುವಂತೆ, ಕಿವಿ ಮಾತು ಹೇಳಿದರು. ರಾಜ್ಯದಲ್ಲಿ ಅದರಲ್ಲಿಯೂ ವಿಶೇಷವಾಗಿ ರಾಜಧಾನಿ ಬೆಂಗಳೂರು ನಗರದಲ್ಲಿ, COVID ಪ್ರಕರಣಗಳು ಆತಂಕಕಾರಿ ಯಾಗಿ, ಉಲ್ಬಣ ಗೊಳ್ಳುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಅವರು ಹಿರಿಯರು, ತಮಗಿರುವ ಅನುಭವ ಹಾಗೂ ಹಿರಿತನದ ಹಿನ್ನೆಲೆಯಲ್ಲಿ ಸರಕಾರದ ಕಾಳಜಿಯನ್ನು ಅರ್ಥೈಸಿ ಕೊಳ್ಳಬೇಕು, ಎಂದು ವಿನಂತಿಸಿದರು.
COVID ಮಹಾಮಾರಿ ಭೀತಿಯ ಹಿನ್ನೆಲೆಯಲ್ಲಿ, ನಗರದಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಮೂರು ದಿನಗಳ ಪಕ್ಷದ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿಕೊಳ್ಳಲಾಗಿದೆ. ಕಾಂಗ್ರೆಸ್ ಸಹ ತಮ್ಮ ಕಾರ್ಯಕ್ರಮ ಮುಂದೂಡಲಿ, ಎಂದು ಸಲಹೆ ನೀಡಿದರು. COVID ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸರಕಾರದ ಜೊತೆಗೆ ಕೈ ಜೋಡಿಸಿ ಸಹಕರಿಸಬೇಕು ಎಂದೂ ಸಚಿವರು, ಸಾರ್ವಜನಿಕರಿಗೆ ಮನವಿ ಮಾಡಿದರು.