ಬೆಂಗಳೂರು: ಸದ್ಯಕ್ಕೆ ಎನ್ಆರ್ಬಿಸಿ – 5ಎ ಕಾಲುವೆಯನ್ನು ಮಾಡಲು ಆಗುವುದಿಲ್ಲ. ಈ ಕಾಲುವೆಯ 15 ಕಿಮೀ ಸುರಂಗ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹಾದು ಹೋಗುತ್ತದೆ. ಅದನ್ನು ಹಟ್ಟಿ ಮೈನ್ಸ್ ಅವರು ಒಪ್ಪುವುದಿಲ್ಲ. ಅದಲ್ಲದೇ 80 ಮೀಟರ್ ಡೀಫ್ ಕಟ್ ಕೂಡ ಬರುತ್ತದೆ. ಅದಕ್ಕಾಗಿ ಈ ಕಾಲುವೆಯನ್ನು ಮಾಡುವುದು ಕಷ್ಟ ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ವಾಟರ್ ಲೋಕೆಷನ್ ಇಲ್ಲ. ಕಾಲುವೆಯ 15 ಕಿಮೀ ಸುರಂಗ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹೋಗುತ್ತದೆ. ಅದನ್ನು ಅವರು ಒಪ್ಪುವುದಿಲ್ಲ. 80 ಮೀಟರ್ ಡೀಫ್ ಕಟ್ ಕೂಡ ಬರುವುದರಿಂದ ಸದ್ಯದಲ್ಲಿ ಕಾಲುವೆ ನಿರ್ಮಾಣ ಮಾಡುವಂತಹ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಅಂದಿನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ನೀಡಿದ್ದ ಭರವಸೆಯನ್ನು ಬಸನಗೌಡ ತುರುವಿಹಾಳ ನೆನಪಿಸಿದರು. ಆಗ ಭರವಸೆ ಕೊಟ್ಟು, ಈಗ ಮಾಡೋದಕ್ಕೆ ಆಗಲ್ಲ ಅಂದ್ರೇ ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಉಪಚುನಾವಣೆ ವೇಳೆ ಮಸ್ಕಿ ಭಾಗದಲ್ಲಿ ನೀರಾವರಿ ಯೋಜನೆ ಆಗ್ಬೇಕು ಎಂದು ರೈತರು ಪ್ರತಿಭಟನೆ ಮಾಡಿದ್ದರು. ಆ ಸಂದರ್ಭದಲ್ಲಿ ನಾನು ರೈತರನ್ನು ಭೇಟಿ ಮಾಡಿದ್ದೇ, ಆಗ ನಮಗೆ ಒತ್ತಾಯ ಮಾಡಿದ್ರು, ನಾನು ಅಧಿವೇಶನದಲ್ಲಿ ತರ್ತಿವಿ ಅಂತ ಹೇಳಿದ್ವಿ, ಪಾಸಿಟಿವ್ ಆಗಿ ಹೇಳಿ, ಒಂದೇ ಸಲಕ್ಕೆ ಆಗಲ್ಲ ಎಂದರೇ ಹೇಗೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ ಅವರು, ಈ ಕಾಲುವೆ ನಿರ್ಮಾಣದಿಂದ ಕೃಷ್ಣ ಮತ್ತು ತುಂಗಭದ್ರಾ ಸಬ್ ಬೆಷನ್ ಕ್ರಾಸ್ ಆಗುತ್ತದೆ. ಸಬ್ ಬೆಷನ್ ಕ್ರಾಸ್ ಆದ್ರೆ ಆಂಧ್ರ ಮತ್ತು ತೆಲಂಗಾಣದವರು ಎದ್ದು ಕೂರ್ತಾರೆ, ಇದರಿಂದ ಅಂತರಾಜ್ಯ ಸಮಸ್ಯೆ ಸೃಷ್ಟಿಯಾಗುತ್ತದೆ. ಕಾಲುವೆಯ 15 ಕಿಮೀ ಸುರಂಗ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹೋಗುತ್ತದೆ. ಆದ್ದರಿಂದ ಮುಂದಿನ ದಿನದಲ್ಲಿ ಪರಿಶೀಲನೆ ಮಾಡಿ, ಬೇರೆ ಯೋಜನೆಯಲ್ಲಿ 5A ಕಾಲುವೆಯಲ್ಲಿ ಪ್ರದೇಶಕ್ಕೆ ಅನುಕೂಲ ಮಾಡಿಕೊಡಲು ಏನ್ ಮಾಡಬೇಕೋ ಮಾಡೋಣ ಎಂದು ಕಾರಜೋಳ ಹೇಳಿದರು.
ಇನ್ನು, ಕಳೆದ ಎರಡು ವರ್ಷದಿಂದ 4701ರಡಿ ತಿಗಡಿ ಹರಿನಾಲಾ ಪ್ರದೇಶದ ರಸ್ತೆಗಳ ನಿರ್ಮಾಣ ಆಗಬೇಕೆಂದು ಕೇಳಿದ್ದೆ, ಆದರೆ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ದೊಡ್ಡನಗೌಡರು ಬಸವಂತರೇ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ಶಾಸಕರು ಆರು ರಸ್ತೆಗಳನ್ನ ಮಾಡಿಕೊಡಲು ಕೇಳಿದ್ದಾರೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಪಂಜಾಯತ್ ಇಲಾಖೆಗೆ ಬರುವ ಮೂರು ರಸ್ತೆಗಳು ಇದಾವೆ. ನಾನು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಮ್ಮ ಜಿಲ್ಲಾ ಪಂಚಾಯತಿ ಸಿಇಒಗಳಿಗೆ ಎನ್ಆರ್ಜಿಯಲ್ಲಿ ಮಾಡಿಕೊಡಿ ಅಂತಾ ಹೇಳ್ತೀನಿ ಎಂದರು.
ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಮೂರು ರಸ್ತೆಗಳಿವೆ. ಅದಕ್ಕೂ ಕೂಡ ಅನುದಾನದ ಕೊರತೆಯಿಂದ ಮಾಡಿಲ್ಲ. ಅಧಿಕಾರಿಗಳೇನೂ ಇಟ್ಟುಕೊಂಡಿಲ್ಲ. ಅದಕ್ಕೂ ಕೂಡ ಎನ್ಆರ್ಜಿಯಲ್ಲಿ ಮಾಡಿಕೊಡಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡುತ್ತೇನೆ ಎಂದರು. ಆಗ ಎನ್ಆರ್ಜಿ ಮೂಲಕ ಮಾಡುವ ರಸ್ತೆಗಳು ರಿಪೇರಿಯಾಗಲು ಸಾಧ್ಯವಿಲ್ಲ, ಅಲ್ಲಿ ಬಸ್ಗಳು ಓಡಾಡ್ಬೇಕು, ಹೀಗಾಗಿ 4701ರಡಿಯಲ್ಲಿ ಮಾಡಿಕೊಂಡುವಂತೆ ದೊಡ್ಡನಗೌಡರು ಮನವಿ ಮಾಡಿದರು.
ಆದರೆ, ನಮ್ಮ ಇಲಾಖೆಗೆ ಒಳಪಡುವ ಸರ್ವಿಸ್ ರೋಡ್ಗಳನ್ನ ಮಾಡಿಕೊಂಡಿರುತ್ತೇವೆ. ಅಲ್ಲಿ ಬಸ್, ಟ್ರಾಕ್ಟರ್ ಓಡಿಸಲು ಅವಕಾಶ ಇಲ್ಲ. ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಮಾಡಿಸಿಕೊಡ್ತಿವಿ ಎಂದು ಗೋವಿಂದ ಕಾರಜೋಳ ಅವರು ಸ್ಪಷ್ಟಪಡಿಸಿದರು.
ದೇವರಹಿಪ್ಪರಗಿ ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ಒಂದು ಕಾಮಗಾರಿಯೂ ಆಗಿಲ್ಲ ಎಂಬ ಬಗ್ಗೆ ವೆಂಕಟರೆಡ್ಡಿ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಮಂಜೂರಾದ ಕಾಮಗಾರಿಗಳನ್ನ ಕೂಡಲೇ ಅನುಷ್ಠಾನ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ಕಳೆದ ಮೂರು ವರ್ಷಗಳಿಂದ ಆ ಪ್ರದೇಶದಲ್ಲಿ ಮಳೆ ಜಾಸ್ತಿಯಾಗಿರುವುದರಿಂದ ಕಾಮಗಾರಿ ಮಾಡಲು ವಿಳಂಬವಾಗಿದೆ. ಕಾಮಗಾರಿ ಮಾಡಲು ಸೂಚನೆ ಕೊಡುತ್ತೇನೆ ಎಂದು ಹೇಳಿದರು.
























































