ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ಆರ್.ಎಲ್.ಜಾಲಪ್ಪ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೋಲಾರದ ದೇವರಾಜ ಅರಸ್ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡರು.
ಶಾಸಕರಾಗಿ, ಸಂಸತ್ ಸದಸ್ಯರಾಗಿ ಸಹಕಾರಿ ಹಾಗೂ ರಾಜ್ಯದ ಗೃಹ ಸಚಿವರಾಗಿ ಕೆಲಸ ಮಾಡಿದ ಅನುಭವ ಜಾಲಪ್ಪ ಅವರಿಗೆ ಇತ್ತು ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಅಪಾರವಾದ ತಮ್ಮದೇ ಛಾಪನ್ನು ಕರ್ನಾಟಕ ರಾಜಕಾರಣದಲ್ಲಿ ಮೂಡಿಸಿದ್ದರು. ಜಾಲಪ್ಪ ಅವರೊಬ್ಬ ಖಡಕ್ ನಾಯಕರು. ನೇರ ನುಡಿ , ಮುಲಾಜಿಲ್ಲದೆ ಸತ್ಯ ನುಡಿಯುವ ನಾಯಕರೆಂದು ಖ್ಯಾತಿ ಪಡೆದಿದ್ದರು ಎಂದವರು ಹೇಳಿದರು.
ದೇವರಾಜ ಅರಸು ಅವರಿಗೆ ಬಹಳ ಹತ್ತಿರವಿದ್ದುದರಿಂದ ಅವರೇ ಒಬ್ಬ ಹಿಂದುಳಿದ ನಾಯಕ ರಾಗಬಹುದಿತ್ತು. ಆದರೆ ಹಲವಾರು ಹಿಂದುಳಿದ ವರ್ಗದ ನಾಯಕರನ್ನು ನಿಸ್ವಾರ್ಥವಾಗಿ ಬೆಳೆಸಿದ್ದಾರೆ. ತನು, ಮನ, ಧನದಿಂದ ಬೆಂಬಲ ನೀಡಿ ಬೆಳೆಸಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದುಳಿದವರಿಗೆ ಸಮಾನವಾದ ಅವಕಾಶಗಳು ದೊರಕಬೇಕೆಂದು ಆರ್.ಎಲ್ ಜಾಲಪ್ಪ ಹೋರಾಟ ಮಾಡಿದರು. ದೇವರಾಜ ಅರಸು ವೈದ್ಯಕೀಯ ಕಾಲೇಜನ್ನು ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರೇ ಮುಂದೆ ಬಂದು, ಕಷ್ಟದಿಂದ ಈ ಸಂಸ್ಥೆಯನ್ನು ಕಟ್ಟಿದರು. ತಮ್ಮ ಜೀವನವನ್ನೇ ಸಂಸ್ಥೆಗಾಗಿ ಮುಡಿಪಿಟ್ಟವರು. ಗಡಿ ಭಾಗ ಕೋಲಾರದಲ್ಲಿ ವೈದ್ಯಕೀಯ ಸೌಲಭ್ಯ ನೀಡಬೇಕೆಂದು ಅವರು ಮಾಡಿದ ಪ್ರಯತ್ನ ಅತ್ಯಂತ ಶ್ಲಾಘನೀಯ ಎಂದು ಸಿಎಂ ಹೇಳಿದರು.