ಬೆಂಗಳೂರು: ರಾಜ್ಯದ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನವೆಂಬರ್ 19ರಿಂದ ಪ್ರತಿ ಜಿಲ್ಲೆಗೆ ಒಂದರಂತೆ “ಜನಸ್ವರಾಜ್ ಸಮಾವೇಶ” ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ “ಭಾವುರಾವ್ ದೇಶಪಾಂಡೆ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಪರಿಷತ್ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಲಿದೆ. ಬಹುತೇಕ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಈ ಚುನಾವಣೆಗೆ ಪೂರ್ವತಯಾರಿ ನಡೆಯಲಿದೆ. ಗ್ರಾಮ ಪಂಚಾಯತ್ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರ ಸಮಾವೇಶವನ್ನು ಮಾಡಲು ಪಕ್ಷ ಯೋಜಿಸಿದೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲಲು ನವೆಂಬರ್ 19ರಿಂದ 23ರವರೆಗೆ ಈ ಸಮಾವೇಶಗಳನ್ನು ಆಯೋಜಿಸಲಾಗುವುದು. ಒಂದು ದಿನಕ್ಕೆ ಎರಡು ತಂಡ ಸಮಾವೇಶದಲ್ಲಿ ಭಾಗವಹಿಸಲಿದೆ. ಒಂದನೇ ತಂಡ ರಾಜ್ಯಾಧ್ಯಕ್ಷರಾದ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಇರುತ್ತದೆ. ಎರಡನೇ ತಂಡ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ, ಮೂರನೇ ತಂಡವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಮತ್ತು ನಾಲ್ಕನೇ ತಂಡವು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
ಮೊದಲನೇ ತಂಡವು 19, 20, 21ರಂದು ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಪ್ರವಾಸ ಮಾಡಲಿದೆ. ಇದರ ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಸಹ ಸಂಚಾಲಕರಾಗಿ ಕೇಶವಪ್ರಸಾದ್ ಇರುತ್ತಾರೆ. ಎರಡನೇ ತಂಡವು ನನ್ನ (ಎನ್.ರವಿಕುಮಾರ್) ಸಂಚಾಲಕತ್ವ ಹೊಂದಿದ್ದು, ರಾಜ್ಯ ಕಾರ್ಯದರ್ಶಿಗಳಾದ ಕೆ.ಎಸ್.ನವೀನ್ ಅವರ ಸಹ ಸಂಚಾಲಕತ್ವದಲ್ಲಿ 4 ದಿನಗಳ ಕಾಲ ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ್, ಬಾಗಲಕೋಟೆ, ವಿಜಯಪುರ ಮತ್ತು ಚಿಕ್ಕೋಡಿ, ಬೆಳಗಾವಿಗಳಲ್ಲಿ ಸಂಚರಿಸಲಿದೆ. ಉತ್ತರ ಕನ್ನಡದಿಂದ ಈ ಯಾತ್ರೆ ಆರಂಭವಾಗಲಿದೆ ಎಂದು ತಿಳಿಸಿದರು.
ಮೂರನೇ ತಂಡವು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ ಅವರ ಸಂಚಾಲಕತ್ವ, ರಾಜ್ಯ ಕಾರ್ಯದರ್ಶಿಗಳಾದ ವಿನಯ ಬಿದರೆ ಅವರ ಸಹ ಸಂಚಾಲಕತ್ವ ಹೊಂದಿದೆ. ಈ ತಂಡವು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಪ್ರವಾಸ ಮಾಡಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಸಂಚಾಲಕರಾಗಿ, ಮುನಿರಾಜು ಗೌಡ ಅವರು ಸಹ ಸಂಚಾಲಕರಾಗಿರುವ ನಾಲ್ಕನೇ ತಂಡವು ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ 7 ಜಿಲ್ಲೆಗಳನ್ನು ಒಳಗೊಂಡಿದೆ ಎಂದರು.
ಹಿಂದಿನ ಬಾರಿ 7 ಸೀಟುಗಳನ್ನು ನಾವು ಗೆದ್ದಿದ್ದೆವು. ಈ ಬಾರಿ ಅತಿ ಹೆಚ್ಚು ಸೀಟು ಗೆಲ್ಲಲು ಪಕ್ಷ ಮುಂದಾಗಿದೆ ಎಂದರು. ಇದಕ್ಕಾಗಿ ಮುಂಚಿತವಾಗಿ ಸಮಾವೇಶ ನಡೆಸಲಾಗುತ್ತಿದೆ. ಮೊದಲನೇ ಸಮಾವೇಶದ ಆರಂಭದಲ್ಲಿ 4 ತಂಡಗಳು ಒಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷನ ಮನೆಯಲ್ಲಿ ಉಪಾಹಾರ ಮಾಡಿ ಅಲ್ಲಿಂದ ಸಮಾವೇಶಕ್ಕೆ ಹೋಗುವ ಯೋಚನೆ ಮಾಡಿದ್ದೇವೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ನಾಯಕರ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚಿಸಲಾಗುವುದು. ಅಭ್ಯರ್ಥಿಗಳ ಕುರಿತು ಕೇಂದ್ರದ ನಾಯಕರು ನಿರ್ಧರಿಸಲಿದ್ದಾರೆ ಎಂದು ವಿವರಿಸಿದರು. ಮೈಸೂರಿಗೆ ಸಂದೇಶ್ ನಾಗರಾಜ್ ಅವರು ಟಿಕೆಟ್ ಕೇಳಿದ್ದಾರೆ. ಅದರ ಬಗ್ಗೆ ನಮ್ಮ ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದರು.
ಜೆಡಿಎಸ್ನ ಮನೋಹರ್ ಅವರು ಬಿಜೆಪಿ ಸೇರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ಚರ್ಚೆ ನಡೆಯುತ್ತಿದೆ. ಇನ್ನೂ ಅನೇಕರು ಹೇಳುತ್ತಿದ್ದಾರೆ. ಕೊಟ್ಟ ಅರ್ಜಿಗಳನ್ನು ಪಕ್ಷ ಪರಿಶೀಲಿಸಲಿದೆ ಎಂದು ತಿಳಿಸಿದರು. ಇದರ ಅರ್ಥವೇ ಬಿಜೆಪಿ ಅತಿ ಹೆಚ್ಚು ಸೀಟು ಗೆಲ್ಲಲಿದೆ ಎಂಬುದಾಗಿದೆ ಎಂದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ ಅವರು ಮಾತನಾಡಿ, ಸಿದ್ದರಾಮಯ್ಯ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ನ ರಾಮಲಿಂಗಾರೆಡ್ಡಿ ಮತ್ತಿತರ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಟ್ ಕಾಯಿನ್ ವಿಚಾರ ಮರೆಮಾಚಲು ಪತ್ರಿಕಾಗೋಷ್ಠಿ ಕರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪಾಪ ಉಗ್ರಪ್ಪನವರು ಎಲ್ಲಿ ಹೋದರೋ ಗೊತ್ತಾಗುತ್ತಿಲ್ಲ. ಉಗ್ರಪ್ಪನವರು ಪ್ರತಿ ವಿಷಯಕ್ಕೂ ಬರುತ್ತಿದ್ದರು. ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ನವರು ಉಡಾಫೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.