ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ನಾಯಕರ ವಾಕ್ಸಮರ ಬಗ್ಗೆ ಬಿಜೆಪಿ ತನ್ನದೇ ದಾಟಿಯಲ್ಲಿ ವ್ಯಂಗ್ಯವಾಡಿದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಡಿಕೆಶಿ ಎಚ್ಚರಿಕೆ ನೀಡಿದ ಬಳಿಕವೂ ಜಮೀರ್ ಅಹ್ಮದ್ ಖಾನ್ ಕಿಂಚಿತ್ ಹೆದರಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಶಿವಕುಮಾರ್ ಅವರ ಸ್ಟ್ರೈಕ್ ರೇಟ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದಕ್ಕೆ ಈ ವಿದ್ಯಮಾನವೇ ಸಾಕ್ಷಿ. ಕೆಪಿಸಿಸಿ ಅಧ್ಯಕ್ಷರ ಆಜ್ಞೆಗೆ ಕವಡೆ ಕಿಮ್ಮತ್ತಿಲ್ಲವೇ? ಎಂದು ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.
ಜಮೀರ್ ಹೇಳಿಕೆ ಸಿದ್ದರಾಮಯ್ಯ ಅವರ ಟೂಲ್ ಕಿಟ್ ರಾಜಕಾರಣ ಒಂದು ಭಾಗ. ಇದು ಗೊತ್ತಿದ್ದು ಡಿ.ಕೆ.ಶಿವಕುಮಾರ್ ಮೌನಕ್ಕೆ ಶರಣಾಗಬೇಕಾಗಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಪರ ಮಾತನಾಡಲು ಕಾಂಗ್ರೆಸ್ ಪಕ್ಷದಲ್ಲಿ ಒಂದು ನರಪಿಳ್ಳೆಯೂ ಇಲ್ಲವೇ!? ಎಂದು ಬಿಜೆಪಿ ಪ್ರಶ್ನಿಸಿದೆ. ಕೆಪಿಸಿಸಿ ಅಧ್ಯಕ್ಷ ಎಂದರೆ ಕಾಂಗ್ರೆಸ್ ಹೈಕಮಾಂಡಿನ ನೇರ ಪ್ರತಿನಿಧಿ ಎಂಬುದು ಕಾಂಗ್ರೆಸ್ ವ್ಯವಸ್ಥೆ. ಆದರೆ ಜಮೀರ್ ಅವರಂತ ಶಾಸಕರೇ ಕೆಪಿಸಿಸಿ ಅಧ್ಯಕ್ಷರನ್ನು ಕಾಡುವುದನ್ನು ನೋಡಿದರೆ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸುತ್ತಿರುವ ಲಕ್ಷಣ ಕಾಣುತ್ತಿದೆ. ಅಂದರೆ ಡಿಕೆಶಿ ಬೆವರಿನ ಶ್ರಮ ವ್ಯರ್ಥವೇ? ಎಂದೂ ವ್ಯಾಖ್ಯಾನಿಸಿದೆ.
ತಾನು ಕನಕಪುರದ ಬಂಡೆ, ಟ್ರಬಲ್ ಶೂಟರ್ ಇತ್ಯಾದಿ ಬಿರುದಾಂಕಿತರಾದ ಡಿ.ಕೆ.ಶಿವಕುಮಾರ್ ಅವರೇ ಇದೀಗ ಟ್ರಬಲ್ಗೆ ಸಿಲುಕಿದ್ದಾರೆ. ಜೆಡಿಎಸ್ ತ್ಯಜಿಸಿ ಓಡಿ ಬಂದ ಸಾಮಾನ್ಯ ಶಾಸಕನ ಬಾಯಿ ಮುಚ್ಚಿಸಲಾರದಷ್ಟು ಡಿಕೆಶಿ ಅಸಹಾಯಕರಾಗಿದ್ದೇಕೆ? ಎಂದು ಮಾಡಿರುವ ಟ್ವೀಟ್ ಗಮನಸೆಳೆದಿದೆ.
ತಾನು ಕನಕಪುರದ ಬಂಡೆ, ಟ್ರಬಲ್ ಶೂಟರ್ ಇತ್ಯಾದಿ ಬಿರುದಾಂಕಿತರಾದ @DKShivakumar ಅವರೀಗ ಟ್ರಬಲ್ಗೆ ಸಿಲುಕಿದ್ದಾರೆ.
ಜೆಡಿಎಸ್ ತ್ಯಜಿಸಿ ಓಡಿ ಬಂದ ಸಾಮಾನ್ಯ ಶಾಸಕನ ಬಾಯಿ ಮುಚ್ಚಿಸಲಾರದಷ್ಟು ಡಿಕೆಶಿ ಅಸಹಾಯಕರಾಗಿದ್ದೇಕೆ?#ಅಸಹಾಯಕಡಿಕೆಶಿ
— BJP Karnataka (@BJP4Karnataka) July 25, 2022


















































