ಬೆಂಗಳೂರು: ಚನ್ನಪಟ್ಟಣದ ವಿಧಾನ ಪರಿಷತ್ ಸದಸ್ಯರಿಗೆ ಕೋರಿಕೆ ಮೇರೆಗೆ 50 ಕೋಟಿ ರೂಪಾಯಿ ಅನುದಾನ ನೀಡಿದಂತೆ ನಮ್ಮ ಪಕ್ಷದ ಎಲ್ಲ ವಿಧಾನ ಪರಿಷತ್ ಸದಸ್ಯರಿಗೂ 50 ಕೋಟಿ ರೂ. ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಶೀಘ್ರವೇ ಪಕ್ಷದ ಎಲ್ಲ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗಿ ಒತ್ತಾಯ ಮಾಡಲಾಗುವುದು ಎಂದರು.
ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಒಬ್ಬರಿಗೆ 50 ಕೋಟಿ ಅನುದಾನ ಕೊಟ್ಟ ಬಗ್ಗೆ ತಕರಾರಿಲ್ಲ. ಅದೇ ಉದಾರತೆಯನ್ನು ಮುಖ್ಯಮಂತ್ರಿಗಳು ನಮ್ಮ ಪಕ್ಷದ ಎಲ್ಲ ವಿಧಾನ ಪರಿಷತ್ ಸದಸ್ಯರ ಬಗ್ಗೆಯೂ ತೋರಬೇಕು ಎಂದು ಹೇಳಿದರು.
ಕಲಾವಿದರ ಕೋಟಾದಲ್ಲಿ ಮೇಲ್ಮನೆಗೆ ನಾಮಕರಣಗೊಂಡ ಸದಸ್ಯರಿಗೆ ಒಬ್ಬರಿಗೆ ಅನುದಾನ ನೀಡಿದ್ದಾರೆ ಮುಖ್ಯಮಂತ್ರಿಗಳು. ಅದೇ ಮೇಲ್ಮನೆಗೆ ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ವಿವಿಧ ಕ್ಷೇತ್ರಗಳಿಂದ ನಾಮಕರಣಗೊಂಡ ಇತರೆ ಸದಸ್ಯರೂ ಇದ್ದಾರೆ. ಅವರಿಗೂ ತಲಾ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಚನ್ನಪಟ್ಟಣ ಘಟನೆಗೆ ಯಾರ ಚಿತಾವಣೆ, ಅದರ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನನ್ನ ಬಳಿ ದಾಖಲೆಗಳೂ ಇವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುತ್ತೇನೆ. ಶಿಷ್ಟಾಚಾರದ ಲೋಪ ಎಸಗಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಹಾಗೂ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.
ಶಿಷ್ಟಾಚಾರದ ಲೋಪ ಆಗಿದ್ದರೂ ಆ ಕಾರ್ಯಕ್ರಮ ನಡೆಯಲು ಯಾಕೆ ಬಿಟ್ಟರು ಅನ್ನುವುದೇ ಪ್ರಶ್ನೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲು ಪೊಲೀಸರಿಗೆ ಕುಮಕ್ಕು ಕೊಟ್ಟವರು ಯಾರು? ಈ ಬಗ್ಗೆ ಪೂರ್ಣವಾದ ತನಿಖೆ ಆಗಬೇಕು ಎಂದು ಕುಮಾರಸ್ವಾಮಿ ಅವರು ಸರಕಾರವನ್ನು ಆಗ್ರಹಪಡಿಸಿದರು.
ಶಿಷ್ಟಾಚಾರದಲ್ಲಿ ಲೋಪವಾಗಿದೆ ಸ್ವತಃ ಜಿಲ್ಲಾಧಿಕಾರಿಗಳೇ ಹೇಳಿದ್ದಾರೆ. ಹಾಗಿದ್ದ ಮೇಲೆ ಈ ಕಾರ್ಯಕ್ರಮವನ್ನು ನಡೆಸಲು ಅವಕಾಶ ಕೊಟ್ಟಿದ್ದು ಏಕೆ? ಜನರ ನಡುವೆ ನಡೆಯಬೇಕಿದ್ದ ಕಾರ್ಯಕ್ರಮವನ್ನು ಶಾಸಕರನ್ನು ದೂರವಿಟ್ಟು ಪೊಲೀಸರ ರಕ್ಷಣೆಯಲ್ಲಿ ನಡೆಸಬೇಕಾದ ಪರಿಸ್ಥಿತಿಗೆ ಕಾರಣವೇನು? ಇವೆಲ್ಲ ಅಂಶಗಳು ತನಿಖೆಯಿಂದ ಹೊರಬರಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಿಎಂಎಸ್ ಟ್ರಸ್ಟ್ ಅಕ್ರಮವನ್ನು ಸದನದಲ್ಲಿ ಬಯಲು ಮಾಡಿದ್ದಕ್ಕೆ ಸೇಡಿನಿಂದ ಚನ್ನಪಟ್ಟಣ ಘಟನೆಯನ್ನ ರೂಪಿಸಲಾಯಿತ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು; ಬಿಎಂಎಸ್ ಟ್ರಸ್ಟ್ ಅಕ್ರಮದ ಪ್ರಸ್ತಾಪಕ್ಕೂ ಚನ್ನಪಟ್ಟಣ ಘಟನೆಗೂ ಸಂಬಂಧ ಇಲ್ಲ ಎನ್ನುವುದು ನನ್ನ ಭಾವನೆ. ನನ್ನ ವಿರುದ್ಧ ಚುನಾವಣೆಯಲ್ಲಿ ಪೈಪೋಟಿ ನಡೆಸುವ ಒಂದು ಭಾಗವಾಗಿ ಇದೆಲ್ಲವನ್ನು ಮಾಡುತ್ತಿದ್ದಾರೆ ಎಂದರು.
ತಪ್ಪು ಎಂದು ಗೊತ್ತಿದ್ದರೂ ಸಚಿವ ಡಾ.ಅಶ್ವತ್ಥನಾರಾಯಣ ಇದನ್ನೆಲ್ಲಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆಗಿರುವುದು 420 ಕೆಲಸ ಎಂದು ಗೊತ್ತಿದ್ದರೂ ಸಚಿವರು ಡಿಫೈನ್ ಮಾಡಿಕೊಳ್ತಾರೆ, ಇನ್ಯಾವುದಕ್ಕೆ ಅವರು ಡಿಫೈನ್ ಮಾಡ್ತಾರೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.





















































