ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಈ ತಿಂಗಳ 26ರಿಂದ ಆರಂಭವಾಗಬೇಕಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದ ಎಲ್ಲಾ ಭಾಗದಲ್ಲೂ ಸೋಂಕು ಏರುತ್ತಲೇ ಇದೆ. ಸರಕಾರ ಅದರ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ಡೌನ್ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಜನರ ಹಿತದೃಷ್ಟಿಯಿಂದ ನಾವು ಜನತಾ ಜಲಧಾರೆಯ ಗಂಗಾ ರಥಯಾತ್ರೆಯನ್ನು ಮುಂದೂಡಿದ್ದೇವೆ. ಸೋಂಕು ಇಳಿಮುಖವಾದ ಕೂಡಲೇ ಆರಂಭ ಮಾಡುತ್ತೇವೆ ಎಂದು ಪ್ರಕಟಿಸಿದರು.
ಪೂರ್ವ ನಿಗದಿಯಂತೆ ಈ ತಿಂಗಳ 26ರಂದು ಜನತಾ ಜಲಧಾರೆ ಕಾರ್ಯಕ್ರಮ ಆರಂಭ ಆಗಬೇಕಿತ್ತು. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಪಕ್ಷ ಮಾಡಿಕೊಂಡಿತ್ತು. ಆದರೆ ಕಾಂಗ್ರೆಸ್ ನವರಂತೆ ನಮಗೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ಮಾಡುವ ಧಾವಂತ ಇಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡೇ ಗಂಗಾ ರಥಯಾತ್ರೆ ಮಾಡುತ್ತೇವೆ ಎಂದು ಮಾಜಿ ಸಿಎಂ ತಿಳಿಸಿದರು.
ಜಲಧಾರೆ ಆರಂಭಕ್ಕೆ ಮುನ್ನ ನಾವು ಜನರಿಗೆ ಈ ಬಗ್ಗೆ ಪೂರ್ಣ ಮಾಹಿತಿ ನೀಡುತ್ತೇವೆ. ಪ್ರತಿ ಮನೆಮನೆಗೂ ಕರಪತ್ರ ಸೇರಿದಂತೆ ಬೇರೆ ಬೇರೆ ರೂಪದಲ್ಲಿ ಜಲಧಾರೆ ಮಾಹಿತಿ ಕೊಡಲಾಗುವುದು. ರಾಜ್ಯದ ನೀರಾವರಿಗೆ ಪಕ್ಷ ನೀಡಿರುವ ಕೊಡುಗೆಗಳನ್ನು ತಿಳಿಸಲಾಗುವುದು. ಮುಖ್ಯವಾಗಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ನೀಡಿರುವ ಕೊಡುಗೆಗಳ ಬಗ್ಗೆ ವಿವಿಧ ರೂಪದಲ್ಲಿ ಜನರಿಗೆ ಮನದಟ್ಟಾಗುವಂತೆ ಹೇಳಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಮ್ಮ ಕಾರ್ಯಕ್ರಮದಲ್ಲಿ ಮುಚ್ಚುಮರೆ ಏನೂ ಇಲ್ಲ. ನಮಗೆ ಐದು ವರ್ಷ ಪೂರ್ಣ ಪ್ರಮಾಣದ ಸರಕಾರ ನೀಡಿದರೆ ರಾಜ್ಯದಲ್ಲೇ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕೈಕೊಳ್ಳುತ್ತೇವೆ. ಅವುಗಳನ್ನು ಹೇಗೆ ಮಾಡಿ ತೋರಿಸುತ್ತೇವೆ ಎಂಬುದನ್ನು ಜಲಧಾರೆ ಕಾರ್ಯಕ್ರಮದ ಮೂಲಕ ಪ್ರಾಮಾಣಿಕವಾಗಿ ರಾಜ್ಯದ ಮುಂದಿಡುತ್ತೇವೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ರಾಜ್ಯದ ನೀರಾವರಿ ಹಿತವನ್ನು ಕಡೆಗಣಿಸುತ್ತಿದೆ. ಅದಕ್ಕೆ ಮತಗಳ ಮೇಲೆ ಮೋಹ ಜಾಸ್ತಿ. ಚುನಾವಣೆ ಹತ್ತಿರ ಬಂದಾಗ ಆ ಪಕ್ಷಕ್ಕೆ ಮೇಕೆದಾಟು ನೆನಪಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಟೀಕಾ ಪ್ರಹಾರ ನಡೆಸಿದರು.
ನಮ್ಮ ನೀರು ನಮ್ಮ ಹಕ್ಕು ಎಂಬ ಕಾರ್ಯಕ್ರಮವನ್ನು ಕಾಂಗ್ರೆಸ್ ಈಗ ಮಾಡಲು ಹೊರಟಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಬಳಿಕ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಮಹಾದಾಯಿ ನೀರಿಗಾಗಿ ಹೋರಾಟ ಮಾಡ್ತಿದ್ದ ರೈತರ ಮೇಲೆ ಪೋಲೀಸ್ ದೌರ್ಜನ್ಯ ನಡೆಸಿತ್ತು ಕಾಂಗ್ರೆಸ್. ಯಮನೂರು ಎಂಬ ಗ್ರಾಮದಲ್ಲಿ ಹಳ್ಳಿಗಳಿಗೆ ನುಗ್ಗಿ ಹೆಣ್ಣುಮಕ್ಕಳ ಮೇಲೆ ಮೈ ಮೇಲೆ ಬಾಸುಂಡೆ ಬರುವಂತೆ ದೌರ್ಜನ್ಯ ಮಾಡಿಸಿತ್ತು ಕಾಂಗ್ರೆಸ್. ಅವತ್ತು ನಮ್ಮ ನೀರು ನಮ್ಮ ಹಕ್ಕು ಅಂತಾ ಹೋರಾಟ ಮಾಡುತ್ತಿದ್ದವರು ರೈತರು ಮಾತ್ರ. ಆದರೆ ಮನೆಹಾಳು ಮಾಡಿದ್ದು ಕಾಂಗ್ರೆಸ್ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಇಂದು ಪಕ್ಷದ ರಾಜ್ಯ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರು, ಹಾಗೂ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ರಾಜ್ಯದ 30 ಜಿಲ್ಲೆಗಳ ಅಧ್ಯಕ್ಷರ ಸಭೆ ಕರೆದಿದ್ದೇವೆ. ಪಕ್ಷದ ವತಿಯಿಂದ ರಾಜ್ಯದ 51 ಸ್ಥಳಗಳಿಂದ ನೀರು ಸಂಗ್ರಹ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ನಡೆಸಬೇಕಾದ ಸಿದ್ಧತೆಗಳ ಬಗ್ಗೆ ಮತ್ತೊಮ್ಮೆ ಮನದತ್ತು ಮಾಡಿಕೊಟ್ಟಿದ್ದೇವೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.